ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪಕೆಳಗಿಳಿಯುವುದು ನಿಶ್ಚಿತವಾಗಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಗ್ಯಾಂಗು ಸಂಪುಟದಿಂದ ಖಾಯಂ ಆಗಿ ಹೊರಬೀಳಲಿದೆ. ಈ ಸ್ಪೋಟಕ ಸಂಗತಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದಲೇ ಬಹಿರಂಗವಾಗಿದ್ದು ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್ ದೊರೆತಿದೆ.

ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳೀನ್ ಕುಮಾರ್ ಕಟೀಲ್ ಅವರು,ಈ ಸಂಗತಿಯನ್ನು ಬಹಿರಂಗಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆಯಲ್ಲದೆ ಸಧ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ, ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ.

ತಮ್ಮ ಆಪ್ತರ ಬಳಿ ಕಟೀಲ್ ಅವರು ತುಳುವಿನಲ್ಲಿ ಮಾತನಾಡಿದ್ದು: ಯಾರಿಗೂ ಹೇಳಬೇಡ. ಶೆಟ್ಟರ್,ಈಶ್ವರಪ್ಪ ಮತ್ತವರ ಟೀಮು ಹೊರಬೀಳಲಿದ್ದು ಆನಂತರ ನಾವು ಹೇಳಿದಂತೆಯೇ ನಡೆಯಲಿದೆ. ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದಿರುವ ನಳೀನ್ ಕುಮಾರ್ ಕಟೀಲ್ ಅವರು, ಆ ಮೂಲಕ ನಾಯಕತ್ವ ಬದಲಾವಣೆಯಿಲ್ಲ ಎಂಬ ಯಡಿಯೂರಪ್ಪ ಅವರ ಆತ್ಮವಿಶ್ವಾಸಕ್ಕೆ ಬಿಗ್ ಷಾಕ್ ನೀಡಿದ್ದಾರೆ.

ಅದೇ ಕಾಲಕ್ಕೆ ಯಡಿಯೂರಪ್ಪರವರ ಸಚಿವ ಸಂಪುಟದಲ್ಲಿರುವ ಮಾಜಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂಡ್ ಟೀಮು ಹೊರಬೀಳಲಿದೆ ಎಂಬ ಅಂಶವನ್ನೂ ಕಟೀಲ್ ಬಹಿರಂಗಪಡಿಸಿರುವುದು ಕುತೂಹಲಕಾರಿಯಾಗಿದೆ.










