ಕೊಪ್ಪಳ: ಹಣ ತುಂಬಿದ್ದಂತ ಬ್ಯಾಗ್ ವೊಂದನ್ನು ಪ್ರಯಾಣಿಕರೊಬ್ಬರು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದು, ಆ ಬ್ಯಾಗ್ ಅನ್ನು, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಮರಳಿ ಪ್ರಯಾಣಿಕನಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿದ್ದಂತ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ನರಸಿಂಹ ಎಂಬ ಪ್ರಯಾಣಿಕ ಪ್ರಯಾಣಿಸುತ್ತಿದ್ದರು. ಅವರು ಸಿಂಧನೂರಿನ ಬಳಿಯಲ್ಲಿ ತಮ್ಮೊಂದಿಗೆ ತಂದಿದ್ದಂತ ಬ್ಯಾಗ್ ಅನ್ನು ಮರೆತು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಆ ಬ್ಯಾಗ್ ಅನ್ನು ಚಾಲಕ ಹಾಗೂ ನಿರ್ವಾಹಕ ಪರಿಶೀಲಿಸಿದಾಗ, ಅದರಲ್ಲಿ ಹಣ ಇರುವುದು ತಿಳಿದು ಬಂದಿದೆ.
ಚಾಲಕ ಮತ್ತು ನಿರ್ವಾಹಕ ಆ ಹಣವಿದ್ದ ಬ್ಯಾಗ್ ಅನ್ನು, ಗಂಗಾವತಿಯ ಡಿಪೋ ಮ್ಯಾನೇಜರ್ ಗೆ ನೀಡಿ ಯಾರಾದರೂ ಕೇಳಿಕೊಂಡು ಬಂದರೇ ವಾಪಾಸ್ ನೀಡುವಂತೆ ಹೇಳಿದ್ದಾರೆ. ತಾವು ಬ್ಯಾಗ್ ಬಿಟ್ಟು ಹೋಗಿದ್ದನ್ನು ನೆನಪಿಸಿಕೊಂಡು ನರಸಿಂಹ ಅವರು ಗಂಗಾವತಿಗೆ ಬಂದು ಡಿಪೋದಲ್ಲಿ ವಿಚಾರಿಸಿದಾಗ, ಅವರ ಹಣವಿದ್ದ ಬ್ಯಾಗ್ ಅನ್ನು ಮರಳಿ ನೀಡಿದ್ದಾರೆ.
ಹಣವಿದ್ದ ಬ್ಯಾಗ್ ಮರಳಿ ಪ್ರಯಾಣಿಕನಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಸಾರಿಗೆ ಬಸ್ ಚಾಲಕ ಮಡಿವಾಳ ಯಮನೂರ ಹಾಗೂ ನಿರ್ವಾಹಕ ರುದ್ರಪ್ಪ ಅವರಿಗೆ ಪ್ರಯಾಣಿಕ ನರಸಿಂಹ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.