

ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಇಡೀ ಆಡಳಿತವನ್ನೇ ಕೈವಶ ಮಾಡಿಕೊಂಡಿದ್ದಾರೆ. ಕಾಬೂಲ್ ಏರ್ಪೋರ್ಟ್ನಲ್ಲಿ ಆರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಬೆಂಗಳೂರಿನ ಫ್ರೇಜರ್ ಟೌನ್, ಮಾರತ್ತಹಳ್ಳಿ ನಿವಾಸಿಗಳು, ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮೂಲದ ಒಬ್ಬರು, ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ಒಬ್ಬರು, ಶಿವಮೊಗ್ಗ ಹಾಗೂ ಮಂಗಳೂರು ಮೂಲದ 6 ಕನ್ನಡಿಗರು ಸಿಲುಕಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ದೊಡ್ಡಮನೆಕೇರಿ ಮೂಲದ ನಿವಾಸಿಯಾಗಿರುವ ಫಾ.ರಾಬರ್ಟ್ ರೋಡ್ರಿಗಸ್, ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಸುದ್ದಿ ಬಹಳ ಚರ್ಚೆಗೆ ಕಾರಣವಾಗಿದೆ. ಫಾ.ರೋಡ್ರಿಗಸ್ ಮೂಲತಃ ತೀರ್ಥಹಳ್ಳಿಯವರಾಗಿರುವುದಾಗಿ ತಿಳಿದುಬಂದಿದ್ದು, ಅವರ ಸಹೋದರಿಯವರು ಬೆಂಗಳೂರಿನಲ್ಲಿ ನಲೆಸಿದ್ದಾರೆ. ಆದರೆ ಮಲೆನಾಡಿನಲ್ಲಿ ಅದರಲ್ಲೂ ಶಿವಮೊಗ್ಗದಲ್ಲಿ ಫಾ.ರೋಡ್ರಿಗಸ್ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುತ್ತಿರುವುದಾಗಿ ಸುದ್ದಿಯಲ್ಲಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಸೇವೆಗಾಗಿ ತೆರಳಿದ್ದ ಫಾ.ರೋಡ್ರಿಗಸ್ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಕ್ಷಣದಿಂದ ಭಾರತಕ್ಕೆ ಬರಲು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಬರಲು ಕಷ್ಟವಾಗಿದೆ. ತಾಲಿಬಾನಿಗಳು ವಿಮಾನ ನಿಲ್ದಾಣವನ್ನ ವಶಪಡಿಸಿಕೊಂಡ ನಂತರ ಅವರ ಬರುವಿಕೆ ಕಷ್ಟವಾಗಿದೆ.
ಆದರೆ ಈ ಬಗ್ಗೆ ಫಾ.ರಾಬರ್ಟ್ ರೋಡ್ರಿಗರ್ಸ್ ತಮ್ಮ ಸ್ನೇಹಿತರ ಬಳಗಕ್ಕೆ ಸಂದೇಶವೊಂದನ್ನು ಕಳುಹಿಸಿದ್ದು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ. ಬಾಮಿಯಾನ್ ಪ್ರಾಂತ್ಯದಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದು, ಅಫ್ಘಾನ್ ತಾಲಿಬಾನ್ಗಳ ತೆಕ್ಕೆಗೆ ತೆಗೆದುಕೊಂಡ ಮೇಲೆ ಸುರಕ್ಷಿತ ಜಾಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.

ಇನ್ನು ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ಟಾ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯಕ್ಕೆ ಸೇಫ್ ಅಂತಾ ಕರೆ ಮಾಡಿ ತಿಳಿಸಿದ್ದಾರಂತೆ. ಇನ್ನು ಮತ್ತೊಬ್ಬ ಪಾದ್ರಿ ಫಾ. ಜೆರೋಮ್ ಸಿಕ್ವೇರಾ ತನ್ನ ಸಹೋದರನಿಗೆ ತಾನು ಸದ್ಯ ಸುರಕ್ಷಿತ ಸ್ಥಳದಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ. ತನ್ನ ಸೋದರ ವಿನ್ಸೆಂಟ್ ಸಿಕ್ವೇರಾ ಜೊತೆ ಫೋನಲ್ಲಿ ಮಾತುಕತೆ ನಡೆಸಿರುವ ಫಾ. ಜೊರೋಮ್ ಸಿಕ್ವೇರಾ. ಅಫ್ಘಾನ್ ರಾಜಧಾನಿ ಕಾಬೂಲ್ನ ಸುರಕ್ಷಿತ ಸ್ಥಳದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಜೆರೋಮ್ ಸಿಕ್ವೇರಾ, ನಿರಾಶ್ರಿತರ ಪರವಾಗಿ ಕೆಲಸ ಮಾಡುವ ಅಂತಾರಾಷ್ಟ್ರೀಯ ಎನ್.ಜಿ.ಓ ದಲ್ಲಿ ಪ್ರಮುಖ ಜವಾಬ್ದಾರಿ ಹೊಂದಿದ್ದರು. ಅಫ್ಘಾನಿಸ್ತಾನದ ಮಧ್ಯ ಪ್ರಾಂತದ ರಾಜಧಾನಿ ಬಾಮಿಯಾನ್ ನಲ್ಲಿ ಫಾ.ಪಿ.ಆರ್ ರಾಬರ್ಟ್ ರೋಡ್ರಿಗಸ್ ಸಿಲುಕಿದ್ದಾರೆ. ತಾಲಿಬಾನಿಗಳಿಂದ ಕಿಡ್ನ್ಯಾಪ್ ಆಗುವ ಆತಂಕದಲ್ಲಿ ಕ್ರೈಸ್ತ ಧರ್ಮಗುರುಗಳಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಜೆಸುಯಿಟ್ ಸಂಸ್ಥೆಯ ಕ್ರೈಸ್ತ ಧರ್ಮಗುರುಗಳಿಂದ ಸರಕಾರಕ್ಕೆ ಮೊರೆ ಹೋಗಿದ್ದಾರೆ. ಸೇವೆ ಸಲ್ಲಿಸಲು ತೆರಳಿದ್ದ ಕ್ರೈಸ್ತ ಧರ್ಮಗುರುಗಳನ್ನು ಏರ್ ಲಿಫ್ಟ್ ಮಾಡಲು ಆಗ್ರಹಿಸಿದ್ದಾರೆ.











