ಕಿರುತೆರೆ ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರ್ ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಮಾಧವ ಮೀಡಿಯಾ ಪ್ರೈ. ಲಿಮಿಟೆಡ್ನ ಬಾಲಾಜಿ ಕಾಪಾ ಎಂಬ ಉದ್ಯಮಿಗೆ ನಿರ್ಮಾಪಕ ರವೀಂದರ್ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಲಿಬ್ರಾ ಪ್ರೋಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದರ್ ಗೆ 2020ರ ಸೆಪ್ಟೆಂಬರ್ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.
ಅವರ ದೂರಿನ ಮೇಲೆ ತನಿಖೆ ನಡೆಸಲಾಗಿದ್ದು, ರವೀಂದರ್ ಅವರು ದಾಖಲೆಗಳನ್ನು ನಕಲು ಮಾಡಿದ್ದು, ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದರ್ ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಹಲವು ವಂಚನೆ ಪ್ರಕರಣಗಳು ದಾಖಲಾಗಿದೆ.