ಮುಂದಿನ ಸೆಕೆಂಡಿನಲ್ಲಿ ನಮ್ಮ ಜೀವ ಇದೆಯೋ ಇಲ್ಲವೋ ಎಂಬೂದು ಹಣೆಬರಹ ಬರೆದ ದೇವನಿಗೆ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲ. ಸಾವು ಯಾವಾಗ, ಎಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗಿದ್ದ ವ್ಯಕ್ತಿ ಮುಂದೆ ಇರುತ್ತಾರೆಯೇ? ಎಂಬ ಗ್ಯಾರಂಟಿಯೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಹಠಾತ್ ಹೃದಯಾಘಾತ ಸಂಭವಿಸಿ ಸಾವುಗಳು ಹೆಚ್ಚುತ್ತಿವೆ.
ಈ ಹಿಂದೆ ಗಣೇಶ ಹಬ್ಬದಂದು ಗಣೇಶ ಮೂರ್ತಿಯ ಎದುರು ಡಾನ್ಸ್ ಮಾಡುತ್ತಿದ್ದಾಗ ಯುವಕನೊಬ್ಬ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆಯೊಂದು ನಡೆದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಣೇಶನ ಮಂಟದ ಎದುರು ಆಂಜನೇಯನ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಹಠಾತ್ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಗಣೇಶ ಮಂಟಪದಲ್ಲಿ ಆಂಜನೇಯನ ವೇಷ ಧರಿಸಿ ನೃತ್ಯ ಮಾಡುತ್ತಿದ್ದ 35 ವರ್ಷದ ರವಿವರ್ಮ ಎಂಬ ವ್ಯಕ್ತಿ, ಗಣೇಶನ ದರ್ಶನ ಪಡೆಯಲು ಬಂದ ಭಕ್ತರನ್ನು ರಂಜಿಸುತ್ತಿದ್ದರು. ಹೀಗೆ ರಂಜಿಸುತ್ತಿದ್ದ ರವಿವರ್ಮ ಜನರೆದುರೇ ಕುಸಿದುಬಿದ್ದಿದ್ದಾರೆ. ಒಂದಷ್ಟು ಸಮಯದವರೆಗೆ ರವಿವರ್ಮ ಏಳದ್ದನ್ನು ಗಮನಿಸಿದ ಇಬ್ಬರು ಯುವಕರು ಹತ್ತಿರ ಬಂದು ಎಬ್ಬಿಸಿದಾಗ ಹೃದಯಾಘಾತವಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಕ್ರಿಯಾಶೀಲರಾಗಿದ್ದ ವ್ಯಕ್ತಿ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿರುವುದನ್ನು ನೋಡಿದ ಜನರಿಗೆ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.