ಬಂಟ್ವಾಳ: ಸಾರ್ವಜನಿಕ ಕಚೇರಿಗಳುಳ್ಳ ಮಿನಿ ವಿಧಾನ ಸೌಧದ ಒಳ ಅವರಣಕ್ಕೆ ಯಾವುದೇ ಪೂರ್ವಾನುಮತಿ ಇಲ್ಲದೆ ಪ್ರವೇಶಿಸಿ ಪ್ರತಿಭಟಿಸಿದ 60 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್. ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಗಸ್ಟ್ 31 ಮಂಗಳವಾರ ಬೆಳಿಗ್ಗೆ 11.30 ರ ವೇಳೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಮಿನಿ ವಿಧಾನ ಸೌಧದ ಕಚೇರಿಗೆ ಸುಮಾರು 50 ರಿಂದ 60 ಜನರ ತಂಡ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಸಾರ್ವಜನಿಕ ಆಸ್ಥಿ ಹಾನಿಯಾಗಿತ್ತು. ಕೋವಿಡ್ 19 ಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ ಕಿಟ್ ವಿತರಿಸುವ ಸಂದರ್ಭದಲ್ಲಿ ಏಕಪಕ್ಷೀಯ ವಾದ ತೀರ್ಮಾನಗಳನ್ನು ತೆಗೆದುಕೊಂಡು ದುರುಪಯೋಗ ಪಡಿಸಲಾಗುತ್ತಿದೆ ಎಂಬ ಆರೋಪ ಇಟ್ಟುಕೊಂಡು ಯಾವುದೇ ಪೂರ್ವಾನು ಮತಿ ಇಲ್ಲದೆ ಭದ್ರತೆಗೆ ಅವಕಾಶವನ್ನು ನೀಡದೆ ಏಕಾಏಕಿಯಾಗಿ ಕಚೇರಿಗೆ ಪ್ರವೇಶ ಮಾಡಿದ್ದಾರೆ ಎಂದು ದೂರಲಾಗಿದೆ.
ತಾಲೂಕು ಕಛೇರಿಗೆ ಘೋಷಣೆಗಳನ್ನು ಕೂಗುತ್ತ ದಿಢೀರ್ ಮುತ್ತಿಗೆ ಹಾಕಿದ್ದಾರೆ. ತಾಲೂಕು ಕಚೇರಿಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೆ ಅಶಾಂತಿ ಸೃಷ್ಟಿಸಿದ್ದಾರೆ. ಕಚೇರಿಯ ಆವರಣದಲ್ಲಿದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದ ಗುಂಪು ಸರಕಾರದ ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶ ಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಲ್ಲದೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ.