
2014ರಿಂದ ಇಲ್ಲಿಯವರೆಗೆ ನಮ್ಮ ಸರ್ಕಾರ ಪಿಎಂ ಆವಾಸ್ ಯೋಜನೆ (PM Awas Yojana)ಯಡಿ ಉತ್ತರ ಪ್ರದೇಶದಲ್ಲಿ 1.13 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. ಅದರಲ್ಲಿ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಕಟ್ಟಿ, ಬಡವರಿಗೆ ಹಂಚಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಉತ್ತರ ಪ್ರದೇಶದ ಲಖನೌನದಲ್ಲಿ ಆಜಾದಿ @75: ನವನಗರ ಭಾರತ-ನಗರ ಭೂಪ್ರದೇಶಗಳ ಪರಿವರ್ತನೆ ಎಂಬ ಸಮ್ಮೇಳನ ಮತ್ತು ಎಕ್ಸ್ಪೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುಮಾರು 75000 ಫಲಾನುಭವಿಗಳಿಗೆ ಪಿಎಂ ಆವಾಸ್ ಯೋಜನೆಯಡಿ ಮನೆಗಳ ಕೀ ವಿತರಿಸಿ ಬಳಿಕ ಮಾತನಾಡಿದರು. ಇದೇ ವೇಳೆ ನರೇಂದ್ರ ಮೋದಿ ವಿವಿಧ 75 ನಗರಾಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ವಸತಿ ಯೋಜನೆ ಫಲಾನುಭವಿಗಳ ಜತೆ ಸಂವಾದವನ್ನೂ ನಡೆಸಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ.80ರಷ್ಟು ಮನೆಗಳಿಗೆ ಮಹಿಳೆಯರೇ ಮಾಲೀಕರಾಗಿದ್ದಾರೆ. ಅದರಲ್ಲಿ ಒಂದಷ್ಟು ಮಹಿಳೆಯರು ಜಂಟಿ ಮಾಲೀಕರಾಗಿದ್ದಾರೆ. ಅಂದರೆ ಶೇ.80ರಷ್ಟು ಮನೆಗಳನ್ನು ಆಯಾ ಕುಟುಂಬದ ಮಹಿಳೆಯರ ಹೆಸರಿಗೇ ಮಾಡಲಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದಲ್ಲಿ ಕೆಲವು ಗಣ್ಯರು, ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆ ಪ್ರಶ್ನೆಗೆ ಇದೇ ಮೊದಲ ಬಾರಿಗೆ ನಾನು ಉತ್ತರಿಸುತ್ತಿದ್ದೇನೆ. ಹಗಲು-ರಾತ್ರಿಯೆನ್ನದೆ ಇಡೀ ದಿನ ನನ್ನ ವಿರುದ್ಧ ಆಕ್ಷೇಪ, ಆರೋಪ ಎತ್ತುತ್ತ, ತಮ್ಮ ಶಕ್ತಿ ವ್ಯಯಿಸುತ್ತಿರುವ ವಿರೋಧ ಪಕ್ಷಗಳು, ನನ್ನ ಈ ಭಾಷಣ ಕೇಳಿದ ಬಳಿಕವೂ ಅದನ್ನು ವಿರೋಧಿಸುತ್ತಾರೆ ಎಂದು ಹೇಳಿದರು.
ದೇಶದಲ್ಲಿ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 3 ಕೋಟಿ ಜನರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಲಕ್ಷಾಧಿಪತಿಗಳಾಗಿದ್ದಾರೆ. ಲಕ್ಷ ರೂ.ಬೆಲೆಬಾಳುವ ಮನೆ ಹೊಂದಿದ ಮೇಲೆ ಅವರೂ ಲಕ್ಷಾಧೀಶ್ವರರೇ ಆಗಿದ್ದಾರೆ. ಮನೆಯೇ ಇಲ್ಲದೆ ಬದುಕುತ್ತಿದ್ದವರು ಪಿಎಂ ಆವಾಸ್ ಯೋಜನೆಯಡಿ ಮನೆ ಪಡೆದು, ತಮ್ಮತಮ್ಮ ಮನೆಯಲ್ಲಿ ದೀಪಾವಳಿ, ದಸರಾ, ಈದ್ ಹಬ್ಬ ಆಚರಿಸುತ್ತಿದ್ದಾರೆ. ಇದು ನನಗೆ ಅತ್ಯಂತ ಖುಷಿ ಕೊಟ್ಟ ವಿಚಾರ ಎಂದು ಹೇಳಿರುವ ಪ್ರಧಾನಿ ಮೋದಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರ ಬಡಜನರ ಅಕೌಂಟ್ಗೆ ಹಣ ಹಾಕಲು ಇಲ್ಲಿಯವರೆಗೆ 1 ಲಕ್ಷ ಕೋಟಿ ರೂ.ವಿನಿಯೋಗಿಸಿದೆ ಎಂದೂ ತಿಳಿಸಿದರು.










