

ಉಡುಪಿ: ನಗರಸಭೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ನಗರದ ಹೃದಯ ಭಾಗದಲ್ಲಿರುವ ಜಾಮಿಯಾ ಮಸೀದಿ ಎದುರಿದ್ದ ಅನಧಿಕೃತ ಎರಡು ಹೊಟೇಲ್ ಗಳಿದ್ದ ಝಾರ ಮತ್ತು ಝೈತೂನ್ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ತಹಶೀಲ್ದಾರ್ ಮತ್ತು ಪೌರಾಯುಕ್ತರು ಮೊಕ್ಕಾಂ ಹೂಡಿದ್ದಾರೆ.

ಜಾಮಿಯಾ ಮಸೀದಿ ಎದುರು ಈ ಮೊದಲು ಗುಜರಿ ಅಂಗಡಿಯಿತ್ತು. ಮಸೀದಿಯಿಂದ ಜಾಗವನ್ನು ಲೀಸ್ ಗೆ ಪಡೆದು ನಿಯಮಗಳನ್ನು ಗಾಳಿಗೆ ತೂರಿ ಹೊಟೇಲ್ ನಿರ್ಮಿಸಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಹಲವು ತಿಂಗಳ ಹಿಂದೆಯೇ ಕಟ್ಟಡ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ. ರಾತ್ರಿಯಿಂದಲೇ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ ನಗರಸಭೆ ಆಡಳಿತ ಶನಿವಾರ ಬೆಳಗ್ಗೆಯೇ ನೂರಾರು ಪೊಲೀಸರ ಭದ್ರತೆಯೊಂದಿಗೆ ಕಾರ್ಯಚರಣೆಗೆ ಇಳಿದಿದೆ. ಹೊಟೇಲ್ ಮಾಲಕರ ತಾವೇ ತೆರವು ಮಾಡುತ್ತೇವೆ ಎಂಬ ಮನವಿಗೆ ನಗರಸಭೆ ಅಧಿಕಾರಿಗಳು ಪುರಸ್ಕರಿಸಿದ್ದು, ಅದರಂತೆ ತೆರವು ಕಾರ್ಯ ಮುಂದುವರಿದಿದೆ.










