ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಇಂದು ಮತ್ತೆ ಮುಂದುವರೆದಿದ್ದು, ವಿದ್ಯಾರ್ಥಿ ನಾಯಕನನ್ನು ಕೆಳಗಿಳಿಸುವಂತೆ ಎಬಿವಿಪಿ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಇಂದು ಸಂಜೆ 4 ಗಂಟೆಗೆ ವಿವಿ ಕುಲಪತಿ ನೇತೃತ್ವದಲ್ಲಿ ಹಿಜಾಬ್ ಧಾರಣೆ ಬಗ್ಗೆ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಪ್ರಕರಣವು ಗಂಭೀರಗೊಳ್ಳುವ ಮುನ್ನ ಜಿಲ್ಲಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ ಕಾಲೇಜು ಪ್ರಾಂಶುಪಾಲರು, ಕಾನೂನು ತಜ್ಞರ ಜೊತೆ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುಮಾರು 1600ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜನಲ್ಲಿ ಇದ್ದಕ್ಕಿದ್ದ ಹಾಗೆ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದರ ಹಿಂದೆ ಸಂಘಟನೆಗಳ ಕೈವಾಡವಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಜಿಲ್ಲಾಡಳಿತದ ವೈಫಲ್ಯವೇ ಕಾರಣ. ವಿವಿ ಕಾಲೇಜಿನಲ್ಲಿ ಹಿಂದಿನಿಂದಲೂ ಶಿರವಸ್ತ್ರಕ್ಕೆ ಅವಕಾಶವಿತ್ತು. ಈಗ ಇದ್ದಕ್ಕಿದ್ದ ಹಾಗೆ ತರಗತಿಯಲ್ಲಿ ಶಿರವಸ್ತ್ರಕ್ಕೆ ಅವಕಾಶವಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಂತಹ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಮುಂದಿನ ಶೈಕ್ಷಣಿಕ ವರ್ಷದಿಂದ ತೆಗೆದುಕೊಳ್ಳಬಹುದಿತ್ತು. ಆದರೂ ಕಾಲೇಜು ಆವರಣದಲ್ಲಿ ಶಿರವಸ್ತ್ರಕ್ಕೆ ನಿರ್ಬಂಧವಿಲ್ಲ. ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳಿಗೆ ಇದನ್ನು ಸ್ಪಷ್ಟ ಪಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿದೆ. ಅವರು ಕ್ಯಾಂಪಸ್ ನಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡಬಾರದು ಎಂದು ಖಾದರ್ ಆಗ್ರಹಿಸಿದ್ದಾರೆ.
ಕಾಮತ್ ಪ್ರತಿಕ್ರಿಯಿಸಿ ‘ವಿದ್ಯಾರ್ಥಿಗಳು ನ್ಯಾಯಾಂಗ ಆದೇಶವನ್ನು ಪಾಲಿಸಬೇಕು. ಡಿಸಿ, ವಿಸಿಗೂ ಕೂಡಾ ಕಾನೂನು ಮೀರುವ ಹಕ್ಕಿಲ್ಲ. ಮಂಗಳೂರು ಕಾಲೇಜನ್ನು ಜೆಎನ್ ಯು ಆಗಲು ಬಿಡಲ್ಲ. ಅಧ್ಯಾಪಕರೇ ಹಿಜಾಬ್ ಬೆಂಬಲಿಸಿದ್ದು ಸರಿಯಲ್ಲ ಎಂದರು.
ಈ ಮಧ್ಯೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನ್ಯಾಸ್ ಆಚಾರ್ಯರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಎಬಿವಿಪಿ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.