ಬಳ್ಳಾರಿ: ಉಪ್ಪಿನಲ್ಲಿ ಮುಚ್ಚಿ ಮಲಗಿಸಿದರೆ ಮಗ ಬದುಕಿ ಬರುತ್ತಾನೆ ಎಂದು ಪೋಷಕರು ಸುಮಾರು ೪ ಗಂಟೆಗಳ ಕಾಲ ಮಗನ ಶವ ಇರಿಸಿ ಕಾದು ನಿಂತ ಘಟನೆ ಬಳ್ಳಾರಿಯ ಸಿರವಾರ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಸ್ನೇಹಿತರ ಜೊತೆ ಈಜಲು ಹೋಗಿದ್ದ ಸಿರವಾರ ಗ್ರಾಮದ ಬಾಲಕ ಸುರೇಶ್ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದ.
ಮಗನನ್ನು ಉಪ್ಪು ಹಾಕಿ ಮುಚ್ಚಿ ಮಲಗಿಸಿದರೆ ಆತ ಬದುಕಿ ಬರುತ್ತಾನೆ ಎಂಬ ಮೂಢನಂಬಿಕೆಯಿಂದ ಪೋಷಕರು ನಾಲ್ಕು ತಾಸುಗಳ ಕಾಲ ಮೃತದೇಹವನ್ನು ಉಪ್ಪಿನಲ್ಲಿಯೇ ಮಲಗಿಸಿದ್ದಾರೆ. ಈಜು ಬಾರದೇ ಇದ್ದರೂ ಈಜಲು ಹೋಗಿದ್ದ ಸುರೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಷಕರು ಮಗನನ್ನು ರಕ್ಷಿಸಲು ಪ್ರಯತ್ನ ಆರಂಭಿಸಿದರು. ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಪೋಸ್ಟ್ಗಳು ವೈರಲ್ ಆಗುತ್ತಿವೆ. ಅದರಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಉಪ್ಪಿನಲ್ಲಿ ಇಟ್ಟರೆ ಮತ್ತೇ ಬದುಕುತ್ತಾನೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಅರದಲ್ಲೂ ಪೇಸ್ಬುಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವೈರಲ್ ಆಗುತ್ತಿರುವ ಪೋಸ್ಟ್ನ್ನು ಸತ್ಯಯೆಂದು ನಂಬಿದ ಗ್ರಾಮದ ಜನ ಇದನ್ನು ಬಾಲಕ ಮೃತಪಟ್ಟಾಗ ಇದೇ ರೀತಿಯಲ್ಲಿ ಬದುಕಿಸಲು ಪ್ರಯತ್ನ ಪಟ್ಟಿದ್ದಾರೆ. ನಾಲ್ಕೈದು ಮೂಟೆ ಉಪ್ಪು ತಂದು ಮಗನ ಶವದ ಮೇಲೆ ಸುರಿದು ಕಾದು ಕುಳಿತಿದ್ದಾರೆ. ಆದರೆ ನಾಲ್ಕು ತಾಸು ಕಳೆದರೂ ಆತ ಬದುಕಿ ಬರದ ಹಿನ್ನೆಲೆಯಲ್ಲಿ ನಾವು ಮಾಡಿದ್ದು ವ್ಯರ್ಥ ಪ್ರಯತ್ನ. ಇದೊಂದು ಮೂಢ ನಂಬಿಕೆ ಎಂದು ತಿಳಿದು ನಂತರ ಶವಸಂಸ್ಕಾರ ಮಾಡಿದ್ದಾರೆ.