ಬಂಟ್ವಾಳ: ತಂದೆಯಿಂದಲೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

2018ರ ಜನವರಿಯಲ್ಲಿ ಮೆಲ್ಕಾರ್ ಲಾಡ್ಜ್ ಮತ್ತು ಇರಾ ಗ್ರಾಮದಲ್ಲಿ ತಂದೆಯಿಂದಲೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರವಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಶರಣಗೌಡ ಹಾಗೂ ಟಿ. ಡಿ. ನಾಗರಾಜ್ ರವರು ತನಿಖೆ ನಡೆಸಿ ಆರೋಪಿ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ದಾವೂದ್ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೊಂಡು ನ್ಯಾಯಾಧೀಶರಾದ ಕೆ.ಎಮ್. ರಾಧಾಕೃಷ್ಣ ರವರು ಅರೋಪಿಗೆ 15 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ ಹಾಗೂ ರೂ. 25000/- ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀ ವೆಂಕಟರಮಣ ಸ್ವಾಮಿರವರು ವಾದ ಮಂಡಿಸಿದ್ದರು.









