ಮಂಗಳೂರು: ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕೆಥೊಲಿಕ್ ಕ್ಲಬ್ ವರೆಗಿನ ರಸ್ತೆಗೆ ಇಂದು ನೂತನವಾಗಿ ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಅವರು ‘ಮುಲ್ಕಿ ಸುಂದರ ರಾಮ ಶೆಟ್ಟಿ’ ನಾಮಕರಣ ಮಾಡಿ ನಾಮಫಲಕವನ್ನು ಉದ್ಘಾಟಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರವು 2017 ಮೇನಲ್ಲಿ ಈ ರಸ್ತೆಗೆ ಮೂಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿತ್ತು.ಆದರೆ ಈ ಬಗ್ಗೆ ಆಕ್ಷೇಪಗಳು ಬಂದಿದ್ದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. 2017 ರ ಜುಲೈ ನಲ್ಲಿ ಕೋರ್ಟ್ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು.
ಬಳಿಕ 2019 ರ ಎಪ್ರಿಲ್ 11 ರಂದು ಈ ಪ್ರಸ್ತಾವನೆ ಯನ್ನು ಪುನರ್ ಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿತ್ತು. ಹೀಗಾಗಿ ಕೋರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲು ಸರಕಾರವು ಪಾಲಿಕೆಗೆ ಸೂಚಿಸಿತ್ತು.
ತದನಂತರ ಈ ಪ್ರಸ್ತಾವನೆಯನ್ನು ಅನುಮೋದಿಸಿ ಇದೀಗ ಹೆಸರಿಡಲು ಆದೇಶ ನೀಡಿತ್ತು. ಈ ಬಗ್ಗೆ ನಿನ್ನೆ ನಡೆದ ನಗರಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ ಅವರು ನಾಮಕರಣ ವಿಚಾರವನ್ನು ಘೋಷಿದ್ದರು. ಅದರಂತೆ ಇಂದು ಈ ರಸ್ತೆಗೆ ನಾಮಕರಣ ಮಾಡಲಾಯಿತು. ವಾದ್ಯ ಘೋಷಗಳೊಂದಿಗೆ ಕಾರ್ಯಕ್ರಮ ನಡೆಸಲಾಯಿತು.