ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಮಗಳ ಕತ್ತು ಕೊಯ್ದು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.
ಯುವತಿ ಕವನ (20) ಮೃತ ದುರ್ದೈವಿ, ಮಂಜುನಾಥ್ (47) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ತಂದೆ. ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ತಂದೆ, ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಆರೋಪಿ ಮಂಜುನಾಥ್ ಕಿರಿಯ ಮಗಳು ಪ್ರೀತಿಸಿ ಬೇರೊಬ್ಬ ಯುವಕನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನು ಪ್ರೀತಿ ಮಾಡ್ತಿದ್ದೀಯಾ? ನಾವು ಊರಲ್ಲಿ ಹೇಗೆ ಮರ್ಯಾದೆಯಿಂದ ಒಡಾಡಬೇಕು ಅಂತಾ ಮಗಳನ್ನು ಕೊಂದೇಬಿಟ್ಟಿದ್ದಾನೆ. ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್, ಕೋಳಿ ಕತ್ತರಿಸುವ ಕತ್ತಿಯಿಂದಲೇ ಮಗಳ ಕತ್ತು ಕೊಯ್ದು ಕೊಲೆ ಮಾಡಿ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.