ಹಳೇ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಮುಗಿಲೆತ್ತರದ ಮೊಬೈಲ್ ಟವರ್ ನೆಲ ಕಚ್ಚಿದ್ದು, 11 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಲಗ್ಗೆರೆಯಲ್ಲಿ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಜೆಸಿಬಿಯಲ್ಲಿ ಸೈಟ್ ಕ್ಲೀನ್ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿ ಮುಂಭಾಗ ಟವರ್ಗೆ ತಗುಲಿದ್ದ ಮನೆ ಸಮೇತ ಧ್ವಂಸವಾಗಿದೆ.
ಮೊಬೈಲ್ ಟವರ್ಗೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಜನ ವಾಸ ಮಾಡುತ್ತಿದ್ದರು. ಟವರ್ ಬೀಳುವುದಕ್ಕೂ ಮುಂಚೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಆದ್ದರಿಂದ 11 ಮಂದಿಯ ಪ್ರಾಣ ಉಳಿದಿದೆ. ಮೊಬೈಲ್ ಟವರ್ ಬಿದ್ದಿದ್ದರಿಂದ ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಯ ಮೇಲೆ ಟವರ್ ಬಿದ್ದು ಹಾಳಾಗಿದೆ.
ಲಗ್ಗೆರೆ ಮೊಬೈಲ್ ಟವರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯ ಇಂಜಿನಿಯರ್ಗಳು ಹಾಗೂ ಬಿಬಿಎಂಪಿಯಿಂದ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಸೈಟ್ ಕ್ಲೀನ್ ಮಾಡುವಾಗ ಜೆಸಿಬಿಯಿಂದ ಮೊಬೈಲ್ ಟವರ್ ಬಿದ್ದಿದ್ದು ಕ್ರಮ ವಹಿಸುವಂತೆ ಸೈಟ್ ಮಾಲೀಕ ಹರೀಶ್ ವಿರುದ್ಧ ದೂರು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.