ಕಾಲೇಜು ದಿನಗಳಲ್ಲಿ ಪ್ರೇಮಾಂಕುರವಾಗಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದ ಪ್ರೇಮಿಗಳಿಗೆ ಪೋಷಕರೇ ವಿಲನ್ ಆಗಿದ್ದು, ಇದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಮ್ಮಿಷ್ಟದಂತೆ ಚಿಕ್ಕದೊಂದು ಗೂಡು ಕಟ್ಟಿಕೊಂಡು ಪ್ರೇಮಿಗಳು ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಇದರಿಂದ ಕೋಪಗೊಂಡು ಮನೆಗೆ ಎಂಟ್ರಿ ಕೊಟ್ಟ ಯುವತಿಯ ಪೋಷಕರು ಪ್ರೇಮಿಗಳನ್ನು ದೂರ ಮಾಡಿದ್ದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಯುವತಿಯ ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಣಿಕಂಠ ಮತ್ತು ಐಶ್ವರ್ಯ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.
ಬೆಂಗಳೂರಿನ HSR ಲೇಔಟ್ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸವಿದ್ದರು. ಇವರಿಬ್ಬರ ಪ್ರೀತಿಗೆ ಯುವಕನ ಕುಟುಂಬಸ್ಥರು ಸಮ್ಮತ್ತಿ ನೀಡಿದ್ದರು. ಆದರೆ ಈ ಪ್ರೀತಿ ಯುವತಿಯ ಕುಟುಂಬಕ್ಕೆ ಇಷ್ಟ ಇರಲಿಲ್ಲ. ವಿಚಾರ ಗೊತ್ತಾಗುತ್ತಿದ್ದಂತೆ ಇವರಿಬ್ಬರಿದ್ದ ಮನೆಗೆ ಯುವತಿ ಕುಟುಂಬಸ್ಥರು ಆಗಮಿಸಿದ್ದಾರೆ. ಮಣಿಕಂಠ ಮತ್ತು ಐಶ್ವರ್ಯ ಇಬ್ಬರನ್ನು ರೂಮ್ ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಬಳಿಕ ಯುವತಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನೊಂದಿದ್ದ ಯುವಕ ಮಣಿಕಂಠ ತಮಿಳುನಾಡಿನ ಜೋಲಾರಪೇಟೆಗೆ ಹೋಗಿ ತನ್ನ ತಾಯಿ, ಪ್ರಿಯತಮೆಗೆ ಕರೆ ಮಾಡಿ ಮಾತನಾಡಿ ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ.