


ಬಾಗಲಕೋಟೆ: ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸೀಮಿಕೇರಿ ಬಳಿ ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬಾಗಲಕೋಟೆ ತಾಲೂಕಿನ ಕೇಸನೂರು ಗ್ರಾಮದ ನಿವಾಸಿ ರಮೇಶ್ ಹೂಗಾರ(45) ಹಾಗೂ ಗದ್ದನಕೇರಿ ನಿವಾಸಿ ಅಕ್ಬರ್ ನಬಿಸಾಬ್ ಚೇರ್ಮನ್ (33) ಎಂದು ಗುರುತಿಸಲಾಗಿದೆ.ಎದುರಿಗೆ ಬಂದ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ, ಕಾರಿನ ಮೇಲೆ ಪಲ್ಟಿಯಾಗಿ ಬೈಕ್ಗೂ ಡಿಕ್ಕಿಯಾಗಿದೆ.ಘಟನೆಯಿಂದ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಬೈಕ್ನಲ್ಲಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಕಾರು ಮತ್ತು ಬೈಕ್ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ವಿಜಯಪುರದ ಕಡೆಗೆ ಪ್ಲಾಸ್ಟಿಕ್ ಚೀಲಗಳಿರುವ ಬ್ಯಾಗ್ ಹೊತ್ತುಕೊಂಡು ಲಾರಿ ಹೊರಟಿತ್ತು.ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








