ಮುಲ್ಕಿ : ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ವಾರಂಟ್ ಆದೇಶದಂತೆ ಬಂಧಿಸಲು ಬಂದಾಗ ಆರೋಪಿಯೋರ್ವ ಕೀಟನಾಶಕ ಸೇವಿಸಿ, ಠಾಣೆಗೆ ಕರೆದೊಯ್ಯುವ ವೇಳೆ ಅಸ್ವಸ್ಥನಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣ ಒಂದರ ಆರೋಪಿಯಾಗಿದ್ದ ಮಂಗಳೂರಿನ ಮುಚ್ಚೂರು ಗ್ರಾಮದ ಕರುಣಾಕರ ಶೆಟ್ಟಿ ಎಂಬವರ ವಿರುದ್ದ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯದ ಆದೇಶ ನೀಡಿತ್ತು. ವಾರಂಟ್ ಆದೇಶದಂತೆ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿಯು ಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರಾದ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿಗಳು ಆರೋಪಿ ಕೆಲಸ ಮಾಡಿಕೊಂಡಿರುವ ಉಡುಪಿಯ ಬಾರ್ ಗೆ ಬಂದಿದ್ದರು.
ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ ಕೀಟನಾಶಕ ಸೇವನೆ ಮಾಡಿ ಬಂದು ಪೊಲೀಸ್ ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡನು, ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.