ತ್ರಿಪುರ(ಅ.29): ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಯುವಕನ ಮೇಲೆ ಯುವತಿ ಆ್ಯಸಿಡ್ ಎರಚಿದ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.
ಆ್ಯಸಿಡ್ ಎರಚಿದ ಆರೋಪಿ ಯುವತಿಯನ್ನು ಬಿನತಾ ಸಂತಾಲ್ (27) ಎಂದು ಗುರುತಿಸಲಾಗಿದ್ದು ಆಕೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಯುವತಿಯ ಪ್ರಿಯಕರ ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದ, ಇದರಿಂದ ಬೇಸತ್ತು ಈ ಕೃತ್ಯ ನಡೆಸಿದ್ದಾಳೆ.
ಆ್ಯಸಿಡ್ ದಾಳಿಗೊಳಗಾದ ಯುವಕನನ್ನು ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕನ ಮೂಗು ಹಾಗೂ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಯುವತಿ 8 ವರ್ಷಗಳಿಂದ ಯುವಕನನ್ನು ತಾನು ಪ್ರೀತಿಸುತ್ತಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಅಲ್ಲದೆ ಕಳೆದ ಕೆಲ ದಿನಗಳಿಂದ ಆತ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರ ತನ್ನ ಗಮನಕ್ಕೆ ಬಂದಿದೆ. ಇದರಿಂದ ತಾನು ಬೇಸರಗೊಂಡಿದ್ದೆ ಎಂದು ಹೇಳಿದ್ದಾಳೆ. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲೇ ಯುವತಿಗೆ ಸಂತ್ರಸ್ತನ ಪರಿಚಯವಾಗಿತ್ತು. 30 ವರ್ಷದ ಸಂತ್ರಸ್ತ ಪದವಿ ಓದು ಮುಗಿಸಿದ ಬಳಿಕ ಪುಣೆಗೆ ಶಿಫ್ಟ್ ಆಗಿದ್ದಾನೆ. ಸಂತಾಲ್ ಪುಣೆಯಲ್ಲಿ ದಾಸಿಯಾಗಿ ಕೆಲಸ ಮಾಡುತ್ತಿದ್ದಳು. 2018ರ ಮಾರ್ಚ್ ತಿಂಗಳಲ್ಲಿ ಯುವಕ ಪುಣೆಯಿಂದ ತ್ರಿಪುರಕ್ಕೆ ಮರಳಿದ್ದನು. ಈ ವೇಳೆ ಸಂತಾಲ್ ನನ್ನು ಆತ ಪುಣೆಯಲ್ಲಿ ಬಿಟ್ಟು ಹೋಗಿದ್ದನು. ಹೀಗಾಗಿ 3 ತಿಂಗಳಲ್ಲಿ ಆಕೆ ಆತನ ಸಂಪರ್ಕ ಕಡಿತಗೊಂಡಿದ್ದಳು.
ಆಗಸ್ಟ್ ತಿಂಗಳಲ್ಲಿ ಸಂತಾಲ್ ತ್ರಿಪುರಾಕ್ಕೆ ಹಿಂದಿರುಗಿದಾಗ ವ್ಯಕ್ತಿಯನ್ನು ಆಕೆ ಮತ್ತೆ ಹುಡುಕಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ರಾಂಚಿಗೆ ತೆರಳಿ ಆರೋಗ್ಯ ತರಬೇತಿ ಶಿಬಿರದಲ್ಲಿ ಕೆಲಸ ಮಾಡಲು ಆರಂಭ ಮಾಡಿದಳು. ಆದರೆ ದುರ್ಗಾ ಪೂಜೆಯ ಸಮಯದಲ್ಲಿ ಮಹಿಳೆ ಬೆಲ್ಚೆರಾ ಗ್ರಾಮದಲ್ಲಿ ಯುವಕನ್ನು ಕಂಡು ಮದುವೆ ಪ್ರಸ್ತಾಪ ಮುಂದಿಟ್ಟಳು. ಈ ವೇಳೆ ನಿರಾಕರಿಸಿದಾಗ ಆತನ ಮೇಲೆ ಕೋಪಗೊಂಡು ಆ್ಯಸಿಡ್ ಎರಚಿದ್ದಾಳೆ.