


ಡೇವಿಲ್ ಚಿತ್ರೀಕರಣ ಮುಕ್ತಾಯದ ಬಳಿಕ ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಟೆಂಪನ್ ರನ್ ಶುರು ಮಾಡಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.
ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ವೈಶಾಖ ಮಾಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು ದಕ್ಷಿಣ ಕಾಶಿ ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.
ಕೊಟ್ಟಿಯೂರಿನಲ್ಲಿ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಮತ್ತು ಅಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ದೇವಾಲಯವು ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುವ ತಾತ್ಕಾಲಿಕ ಮಂದಿರವಾಗಿದೆ. ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು ನಿಯಮಿತ ಪೂಜಾ ವಿಧಿಗಳನ್ನು ನಡೆಸುವ ಶಾಶ್ವತ ಮಂದಿರವಾಗಿದೆ. ಇಲ್ಲಿನ ವೈಶಾಖ ಮಹೋತ್ಸವ ಸುಮಾರು 28 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಜೂ.8ರಿಂದ ಪ್ರಾರಂಭವಾಗಿ ಜು.4ರವರೆಗೆ ದೇವಸ್ಥಾನ ತೆರೆದಿರುತ್ತದೆ. ಆದರೆ ಜೂ.30ರ ನಂತರ ಮಹಿಳಾ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ ಇಲ್ಲಿ ಬರುವ ಭಕ್ತಾದಿಗಳಿಗೆ ತಂಗಲು ವಸತಿ ಸೌಲಭ್ಯವು ಇರುತ್ತದೆ. ದೇವಸ್ಥಾನವು ಬೆಳಿಗ್ಗೆ 5ರಿಂದ ರಾತ್ರಿ 8:30ರವರೆಗೆ ಮಾತ್ರ ತೆರೆದಿರುತ್ತದೆ.








