ಪುಣಚ್ಚ ಗ್ರಾಮ ಪಂಚಾಯತ್ ಅಜ್ಜಿನಡ್ಕ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ಬುನಾದಿ ಹಂತದ ಮಕ್ಕಳ ಪೋಷಕರಿಗೆ ಒಂದು ದಿನದ ಬುನಾದಿ ಕಲಿಕೆಯ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಗಾರದ ಉದ್ಘಾಟನೆಯನ್ನು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಯಾನೆ ಯಶೋಧ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮೂಡಂಬೈಲು ಮತ್ತು ತೀರ್ಥರಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಲಸ್ಟರ್ ಮಟ್ಟದ 6 ಸರಕಾರಿ ಶಾಲೆಗಳಿಂದ ಪೋಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು. ಮೊದಲ ಅವಧಿಯಲ್ಲಿ ಸುರೇಖಾ ಯಳವಾರ ಬಿಐಇಆರ್ಟಿ ಬಂಟ್ವಾಳ ಇವರು ಪೋಷಕರಿಗೆ ಮಕ್ಕಳೊಡನೆ ಪೋಷಕರ ವರ್ತನೆ ಹೇಗಿರಬೇಕು, ಮಕ್ಕಳನ್ನು ಹೇಗೆ ದುಶ್ಚಟಗಳಿಂದ, ವ್ಯಸನಗಳಿಂದ ದೂರವಿರಿಸಬೇಕು ಎಂಬ ವಿಷಯದ ಬಗ್ಗೆ ತಮ್ಮ ಕ್ಷೇತ್ರ ಅಧ್ಯಯನ ಮತ್ತು ಕೌನ್ಸಿಲಿಂಗ್ ಆಧಾರಿತ ಅನುಭವ ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡರು.
ಬಳಿಕ ಡಾ.ನಿವೇದಿತ ತಿಲಕ್ 3 ರಿಂದ 8 ವರ್ಷದ ಮಕ್ಕಳಿಗೆ ಮನೆಯಲ್ಲಿ ಲಭ್ಯ ವಸ್ತುಗಳನ್ನು, ತಂತ್ರಜ್ಞಾನವನ್ನು ಬಳಸಿಕೊಂಡು ದಿನನಿತ್ಯ ಚಟುವಟಿಕೆಯಲ್ಲಿ ಹೇಗೆ ಸಂತಸದಾಯಕ ಕಲಿಕೆಯನ್ನು ಉಂಟು ಮಾಡಬಹುದು, ಶಾಲೆಯೊಂದಿಗೆ ಪೋಷಕರ ಸಂಬಂಧ ಹೇಗಿರಬೇಕು, ಮೂರನೇ ತರಗತಿಯ ಹಂತಕ್ಕೆ ಬರುವಾಗ ಮಗು ಗಳಿಸಬೇಕಾದ ಕಲಿಕಾ ಫಲಗಳು ಮುಂತಾದ ವಿಷಯದ ಕುರಿತು ಒಂದು ಯಶಸ್ವಿ ತಾಯಿಯಾಗಿ ಮಗುವಿನ ಬುನಾದಿ ಕಲಿಕೆಯ ಕುರಿತು ತಾನು ನಡೆಸಿದ ವಿವಿಧ ಯಶಸ್ವಿ ಪ್ರಯೋಗಗಳ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪೋಷಕರಿಗೆ ತರಬೇತಿ ನೀಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿಯಾದ ಪುಷ್ಪಬಲ್ಲಾಳ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣಗಿರಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ಙು ನಡೆಸಿಕೊಟ್ಟರು.