ಅಶೋಕ ಇರಾಮೂಲೆ ಕೇಪು ಇವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ವಾಣಿಜ್ಯ ತೆರಿಗೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡುಗೈ ದಾನಿಯೆಂದೆ ಗುರುತಿಸಿಕೊಂಡವರು.
ಎಲ್ಲರೊಡನೆ ಸಾಮಾನ್ಯರಲ್ಲಿ ತೀರ ಸಾಮಾನ್ಯನೆಂಬಂತೆ ಬದುಕಿದವರು ಅಶಕ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ಅವರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದ ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ವ್ಯಕ್ತಿ, ಅನೇಕ ದೈವ ದೇವಸ್ಥಾನಗಳ ಜೀರ್ಣೋದ್ದಾರಗಳ ಜವಾಬ್ದಾರಿಯನ್ನು ವಹಿಸಿದವರು.
ಕೇಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ, ಶ್ರೀ ದುರ್ಗಾಮಿತ್ರ ವೃಂದ ಮೈರ ಇದರ ಅಧ್ಯಕ್ಷರಾಗಿ ವಿವಿಧ ರೀತಿಯ ಚಟುವಟಿಕೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡು, ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನ ಮತ್ತು ಮಲರಾಯ ದೈವಸ್ಥಾನ ಕೇಪು ಇದರ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ದುರ್ಗಾಸೇವಾ ಸಮಿತಿ ಕೇಪು ಇದರ ಪ್ರಧಾನ ಕಾರ್ಯದರ್ಶಿಯಾಗಿ ,ಕಜಂಬು ಉತ್ಸವದಲ್ಲಿ ಅನ್ನ ಸಂತರ್ಪಣಾ ಸೇವೆಯಲ್ಲಿ ಪ್ರಧಾನ ಪಾತ್ರವಹಿಸಿರುತ್ತಾರೆ.
ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಎರಂಬು ಇದರ ಬ್ರಹ್ಮಕಲಶೋತ್ಸವದಲ್ಲಿ ವಿಶೇಷ ವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಉಪಾಧ್ಯಕ್ಷರಾಗಿ, ಕಲಾ ಪೋಷಕರಾದ ಇವರು ಯಕ್ಷಮಿತ್ರರು ಅಳಿಕೆ, ಕೇಪು ಇದರ ಸ್ಥಾಪಕರು ಆಗಿದ್ದರು.
ತಿಮ್ಮಪ್ಪ ಹಾಗೂ ಗಿರಿಜಾ ದಂಪತಿಗಳ ಮಗನಾದ ಇವರು ಮೂವರು ಸಹೋದರಿ ಯರನ್ನು ಹಾಗೂ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.