ಬೆಂಗಳೂರು: ಯಾರ್ ಇವತ್ತು ಮರ್ಯಾದಾ ಪುರುಷರು, ಶ್ರೀರಾಮ ಚಂದ್ರರು ಎಂದು ಕಾಂಗ್ರೆಸ್, ಜೆಡಿಎಸ್ ನ ಸದಸ್ಯರು ಹೇಳಿಕೊಳ್ತಾ ಇದ್ದಾರೋ.. ರಾಜ್ಯದ ನನ್ನೂ ಸೇರಿ 224 ಶಾಸಕರ ವಿರುದ್ಧವೂ ತನಿಖೆಗೆ ಆಗಲಿದೆ. ಯಾರೂ ಅನೈತಿಕ ಸಂಬಂಧ ಇಲ್ಲವಾ ಅಂತ ತನಿಖೆ ಆಗಲಿ. 225 ಜನರ ನೈತಿಕತೆಯೂ ತನಿಖೆಯಾಗಲಿ. ಯಾರು ಶ್ರೀರಾಮ ಚಂದ್ರ ಅಂತಾನೂ ರಾಜ್ಯದ ಜನರಿಗೆ ಗೊತ್ತಾಗಲಿ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸವಾಲ್ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಸಿಡಿ ವಿಚಾರವಾಗಿ ಕಾಂಗ್ರೆಸ್ ನಾಯಕರು ಸದನದಲ್ಲಿ ಪ್ರತಿಭಟನೆ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಾಗೂ 6 ಸಚಿವರ ರಾಜೀನಾಮೆಗೆ ಒತ್ತಾಯಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ, ಕುಮಾರಣ್ಣ, ರಮೇಶ್ ಕುಮಾರ್ ಇವರೆಲ್ಲರೂ ಸತ್ಯ ಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತವನ್ನು ಬಹಳ ನಿಷ್ಠೆಯಿಂದ ಪಾಲಿಸುತ್ತಿದ್ದಾರಾ? ಇಂದು ಇವರೆಲ್ಲ ಸಮಾಜಕ್ಕೆ ಮಾದರಿಯಾಗಿದ್ದಾರೆ ಅಲ್ಲವೇ? ಇವರೆಲ್ಲರ ವಿರುದ್ಧ ಮಾತ್ರವಲ್ಲ ನನ್ನನ್ನೂ ಸೇರಿದಂತೆ ಎಲ್ಲಾ ಸಚಿವರು, ಶಾಸಕರ ವಿರುದ್ಧವೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಎಲ್ಲಾ ಮಂತ್ರಿಗಳದ್ದು ಶಾಸಕರದ್ದು ವಿರೋಧ ಪಕ್ಷಗಳವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ ಎಂಬುದು ತಿಳಿಯಲಿ ಬಿಡಿ. ಸಮಾಜಕ್ಕೆ ಇವರೆಲ್ಲರೂ ಕೂಡ ಮಾದರಿಯಾಗಿದ್ದಾರೆ. ಆದರೆ ಇವರೆಲ್ಲರೂ ಕೂಡ ಒಪ್ಪಿಕೊಳ್ಳಲಿ. 224 ಶಾಸಕರ ಬಗ್ಗೆಯೂ ಕೂಡ ತನಿಖೆಯಾಗಲಿ ಎಂದು ಸುಧಾಕರ್ ಆಗ್ರಹಿಸಿದ್ದಾರೆ.