ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಗೂಡಿನ ಬಳಿ ಗುಡ್ಡವೊಂದು ಅಪಾಯದ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟವರು ಈಗಲೇ ಎಚ್ಚೆತ್ತು ಕೊಳ್ಳಬೇಕಿದೆ. ಗೂಡಿನಬಳಿಯ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾದಲ್ಲಿ ಸ್ಥಳೀಯ ಮನೆಗಳಿಗೆ ಹಾನಿಯಾಗುವ ಜತೆಗೆ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಪುರಸಭೆಯ ಹಲವು ವಾರ್ಡ್ಗಳ ನೂರಾರು ಮನೆಗಳಿಗೆ ನೀರಿನ ಸಂಪರ್ಕವೂ ಕಡಿತಗೊಳ್ಳುತ್ತದೆ.
ಗೂಡಿನ ಬಳಿಯ ಪ್ರದೇಶವು ಜನ ವಸತಿಯ ಪ್ರದೇಶವಾಗಿದ್ದು, ಗುಡ್ಡದ ತಳಭಾಗದಲ್ಲಿ ಹಲವಾರು ಮನೆಗಳಿವೆ. ಗೂಡಿನಬಳಿಯಿಂದ ಎತ್ತರ ಪ್ರದೇಶ ದಲ್ಲಿರುವ ಮನೆಗಳು ಹಾಗೂ ಟ್ಯಾಂಕ್ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ಪಕ್ಕದಲ್ಲೇ ಹತ್ತಾರು ಮನೆಗಳಿದ್ದು, ಒಂದು ವೇಳೆ ಈ ಗುಡ್ಡ ಕುಸಿದಲ್ಲಿ ಹತ್ತಾರು ಮನೆಗಳಿಗೆ ಹಾನಿಯಾಗಲಿದೆ.
ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿ ಗುಡ್ಡ ಕುಸಿತ ಉಂಟಾದಾಗ ತಹಶೀಲ್ದಾರ್ ಸೂಚನೆಯಂತೆ ಇಂಜಿನಿಯರ್ ಪರಿಶೀಲನೆ ನಡೆಸಿ ಮರಳು ತುಂಬಿದ ಗೋಣಿ ಚೀಲಗಳನ್ನು ಇರಿಸಲಾಗಿತ್ತು. ನೂರಾರು ಗೋಣಿಗಳನ್ನು ಒಂದರ ಮೇಲೊಂದರಂತೆ ಇಡಲಾಗಿದೆ. ಆದರೆ ಇದೀಗ ಬಿಸಿಲಿನ ತೀವ್ರತೆಗೆ ಗೋಣಿಗಳು ಹರಿದು ಮರಳು ಕೆಳಗೆ ಬೀಳುತ್ತಿದೆ. ಒಂದು ವೇಳೆ ಜೋರಾಗಿ ಮಳೆ ಬಂದು ನೀರು ಒಳ ನುಗ್ಗಿದರೆ ಗೋಣಿ ಚೀಲಗಳು ಕೂಡ ಕೆಳಗೆ ಬೀಳುವ ಸ್ಥಿತಿಯಲ್ಲಿ ಇದೆ. ರಸ್ತೆಗೆ ತಾಗಿಕೊಂಡೇ ಗುಡ್ಡ ಕುಸಿದಿದ್ದು, ಇನ್ನು ಸ್ಪಲ್ಪ ಕುಸಿದರೂ, ಈ ಭಾಗಕ್ಕೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.
ಗೂಡಿನಬಳಿಯಲ್ಲಿ ಗುಡ್ಡದ ಮೇಲ್ಭಾಗದಲ್ಲಿ ಪುರಸಭೆಯ ಹಲವು ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕ್ ಇದ್ದು, ಟ್ಯಾಂಕ್ಗೆ ನೀರು ಪೂರೈಕೆ ಮಾಡುವ ಪೈಪ್ ಹಾಗೂ ಅದರಿಂದ ನೀರು ಪೂರೈಕೆಯಾಗುವ ಟ್ಯಾಂಕ್ ಇದೇ ರಸ್ತೆಯ ತಳಭಾಗದಲ್ಲಿದೆ. ಹೀಗಾಗಿ ಗುಡ್ಡ ಕುಸಿಯುವ ವೇಳೆ ಪೈಪ್ಲೈನ್ ಸಂಪರ್ಕ ಕಡಿತಗೊಂಡರೆ ಭಾರೀ ನಷ್ಟವಾಗಲಿದೆ. ಜತೆಗೆ ಹಲವು ತಿಂಗಳುಗಳ ಕಾಲ ನೀರು ಪೂರೈಕೆಗೂ ತೊಂದರೆ ಎದುರಾಗುವ ಆತಂಕವಿದೆ.
ಕಳೆದ ತಿಂಗಳು ಗೂಡಿನಬಳಿ ಕಾಂಗ್ರೆಸ್ ಘಟಕದ ಸದಸ್ಯರು ಮಾನ್ಯ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಗುಡ್ಡ ಜರಿತದ ತ್ವರಿತ ಕ್ರಮಕ್ಕೆ ಆಗ್ರಹಿಸಿದ್ದರು. ಗುಡ್ದ ಕುಸಿತವನ್ನು ತಪ್ಪಿಸಲು ತಡೆಗೋಡೆ ಅಗತ್ಯವಾಗಿದ್ದು, ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೆ ಪುರಸಭೆಯ ಅನುದಾನದಿಂದ ಅದು ಅಸಾಧ್ಯವಾಗಿದೆ.
ಹೀಗಾಗಿ ಶಾಸಕರ ಮೂಲಕ ಸರಕಾರದಿಂದ ಅನುದಾನಕ್ಕಾಗಿ ಮನವಿ ಮಾಡಲಾಗುವುದು. ಸಾಮಾನ್ಯ ತಡೆಗೋಡೆಗಿಂತಲೂ ಹೆಚ್ಚು ಬಲಿಷ್ಠ ಇರುವ ತಡೆಗೋಡೆ ಬೇಕಾಗುತ್ತದೆ ಎಂದು ಪ್ರಸ್ತುತ ಸಮಸ್ಯೆಯ ಬಗ್ಗೆ ಬಂಟ್ವಾಳ ಪುರಸಭಾಧ್ಯಕ್ಷರಾದ ಮಹಮ್ಮದ್ ಶರೀಫ್ ರವರು ತಿಳಿಸಿದ್ದಾರೆ.