ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ. ಈ ಕೃತ್ಯ ನಡೆಯುತ್ತಿದ್ದಂತೆ ಪತಿರಾಯನ ಹೆಣ್ಣು, ಹೊನ್ನಿನ ದಾಹ ಕರ್ಮಕಾಂಡ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 8 ತಿಂಗಳ ಹಿಂದಷ್ಟೆ ಬೆಳಗಾವಿಯ ಶಹಾಪುರದ ಅಳವಣ ಗಲ್ಲಿಯ ನಿವಾಸಿ ರೋಹಿಮ್ ಎಂಬಾತನ ಜೊತೆ ಮುಸ್ಕಾನ್ ಳನ್ನು ವಿವಾಹ ಮಾಡಿ ಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳವರೆಗೆ ಸಭ್ಯನಂತೆ ನಾಟಕವಾಡಿದ್ದ ರೋಹಿಮ್ ಬರಬರುತ್ತಾ ಪತ್ನಿಗೆ ತನ್ನ ಕರಾಳ ಮುಖ ತೋರಿಸಲು ಶುರುಮಾಡಿದ್ದ ಎನ್ನಲಾಗಿದೆ.
ಪ್ರತಿದಿನ ಗಾಂಜಾ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೇ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಹಿಂಸಿಸುತ್ತಿದ್ದ. ಬರಬರುತ್ತಾ ಪತಿಯ ಟಾರ್ಚರ್ ತಾಳಲಾರದೇ ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಸ್ಕಾನ್ ಆತ್ಮಹತ್ಯೆ ಬೆನ್ನಲ್ಲೇ ಪತಿ ಮಹಾಶಯನ ಇನ್ನೊಂದು ರಹಸ್ಯ ಕೂಡ ಬಯಲಾಗಿದೆ. ರೋಹಿಮ್ ಮುಸ್ಕಾನ್ ಳ ದೂರದ ಸಂಬಂಧಿ ಜೊತೆಯೇ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಮುಸ್ಕಾನ್ ಪತಿಯನ್ನು ಪ್ರಶ್ನಿಸಿದ್ದಾಳೆ. ಇದೇ ಕಾರಣಕ್ಕೂ ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮುಸ್ಕಾನ್ ಳ ಕುಟುಂಬದವರು ರೋಹಿಮ್ ವಿರುದ್ಧ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ದೂರು ದಾಖಲಿಸಿದ್ದು, ಆರೋಪಿ ರೋಹಿಮ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.