


ಬೆಳಗಾವಿ: ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ10 ವರ್ಷಗಳ ಹಳೆಯ ಸೇಡಿನ ಹಿನ್ನೆಲೆಯಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಸಡೋಣಿ ಗ್ರಾಮದ ನಿವಾಸಿ, ಬಸಪ್ಪ ಹೊಸಮನಿ(51) ಕೊಲೆಯಾದವರು. ಈರಯ್ಯ ಮಠಪತಿ ಆರೋಪಿಯಾಗಿದ್ದಾನೆ.
ಸುಮಾರು 10 ವರ್ಷಗಳ ಹಿಂದೆ ಬಸಪ್ಪ ಎಂಬಾತ ಆರೋಪಿಯ ತಾಯಿಯೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಓಡಿ ಹೋಗಿದ್ದ ಎನ್ನಲಾಗಿದೆ. ಹಲವು ವರ್ಷಗಳ ಬಳಿಕ ಈರಯ್ಯನ ತಾಯಿಯನ್ನು ಕೊಲ್ಲಾಪುರದಲ್ಲಿಯೇ ಬಿಟ್ಟು ಬಸಪ್ಪ ಗ್ರಾಮಕ್ಕೆ ಬಂದಿದ್ದ. ಇದೇ ವಿಚಾರವಾಗಿ ಸೇಡು ತೀರಿಸಲು ಕಾಯುತ್ತಿದ್ದ ಈರಯ್ಯ, ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಬಸಪ್ಪನನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಸುಮಾರು 16 ಬಾರಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಶವದ ಮೇಲೆ ನಿಂತು ಈರಯ್ಯನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದನು.
ತಾನು 18 ವರ್ಷವಿದ್ದಾಗ ತಾಯಿಯನ್ನು ತನ್ನಿಂದ ದೂರ ಮಾಡಿದ ದ್ವೇಷಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಹತ್ಯೆಗೈದ ವಿಷಯ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಧಾವಿಸಿದ ಬೆಳಗಾವಿ ಪೊಲೀಸರು ಆರೋಪಿ ಈರಯ್ಯನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.








