ಬೆಳ್ತಂಗಡಿ: ಇಲ್ಲಿನ ಹೊಸಂಗಡಿ ಮತ್ತು ಕಾಶಿಪಟ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಪೆರಾಡಿ ವ್ಯಾಪ್ತಿಯಲ್ಲಿ ಬುಧವಾರ ಗಾಳಿ-ಗುಡುಗು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭಾರಿ ಗುಡುಗು, ಗಾಳಿಯಿಂದ ಸುಮಾರು ಒಂದು ಗಂಟೆ ಕಾಲ ಸುರಿದ ಭಾರಿ ಮಳೆಯಿಂದ ಜನ ಭಯಭೀತರಾಗುವ ವಾತಾವರಣ ನಿರ್ಮಾಣವಾಯಿತು.
ಹೊಸಂಗಡಿ ಗ್ರಾಮದಲ್ಲಿ ಸುಮಾರು 10ಕ್ಕೂ ಅಧಿಕ ಮನೆಯ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಲವು ಮನೆಯ ಮತ್ತು ಕೊಟ್ಟಿಗೆಯ ಹಂಚು,ಸೀಟುಗಳು ಹಾರಿ ಹೋಗಿವೆ. ಬಡಕೋಡಿ ಗ್ರಾಮದ ರಾಘವೇಂದ್ರ ನಾಯ್ಕರವರ ಮನೆಯ ಮಾಡು ಹಾರಿ ಹೋಗಿದ್ದು, ಕೀರ್ತಿ ಜೈನ್ರವರ ಮನೆಯ ಮಾಡು ಹಾರಿ ಹೋಗಿ ವಾಹನಗಳ ಮೇಲೆ ಬಿದ್ದು ವಾಹನಗಳು ಕೂಡ ಜಖಂ ಆಗಿವೆ ಎಂದು ತಿಳಿದು ಬಂದಿದೆ.
ಕಾಶಿಪಟ್ಣ ಗ್ರಾಮದಲ್ಲಿ ಸುಮಾರು 30ಕ್ಕಿಂತ ಅಧಿಕ ಮನೆಯ ತೋಟಗಳಿಗೆ ಹಾನಿಯಾಗಿದ್ದು, ಎರಡು ಟ್ರಾನ್ಸ್ ಫಾರ್ಮರ್ ಸೇರಿದಂತೆ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಸುಮಾರು 20ಕ್ಕೂ ಅಧಿಕ ಮನೆಗಳ ಹಂಚು ಮತ್ತು ಸೀಟುಗಳು ಹಾರಿಹೋಗಿದೆ ಎಂದು ತಿಳಿದು ಬಂದಿದೆ.
ಕಾಶಿಪಟ್ಣ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆಗೆ ತಿರುಗಿಸಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಧರಣೇಂದ್ರ ಕುಮಾರ್, ಹೊಸಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ್, ಕಾಶಿಪಟ್ಣ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.