ಬಹರೈನ್: ಬಂಟ್ಸ್ ಬಹರೈನ್ ವತಿಯಿಂದ ಬಂಟ ಕಲಾವಿದರು ಪ್ರಸ್ತುತ ಪಡಿಸಿದ ನಾಡಿನ ಖ್ಯಾತ ನಾಟಕಕರ್ತ ದಿನಕರ ಭಂಡಾರಿ ವಿರಚಿತ, ಹಿರಿಯ ನಾಟಕ ಕಲಾವಿದ ಮೋಹನ್ ದಾಸ್ ರೈ ಎರುಂಬು ನಿರ್ದೇಶನದಲ್ಲಿ “ಬಾಕಿಲ್ ದೆಪ್ಪುಲೆ” ಎಂಬ ಭಕ್ತಿಪ್ರದಾನ ಹಾಸ್ಯಮಯ ತುಳು ನಾಟಕವನ್ನು ಸ್ಥಳೀಯ ಬಂಟ ಕಲಾವಿದರು ಯಶಸ್ವಿ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.
ಅತಿಥಿ ಕಲಾವಿದರಾಗಿ ಆಗಮಿಸಿದ ಕರಾವಳಿಯ ಪ್ರಸಿದ್ಧ ಸಂಗೀತ ನಿರ್ದೇಶಕ ಗುರು ಬಾಯರ್ ರವರ ಅಮೋಘ ಸಂಗೀತ ಈ ನಾಟಕದ ಪ್ರಧಾನ ಆಕರ್ಷಣೆಯಾಗಿ ಮೆರುಗು ನೀಡಿತು.
ದ್ವೀಪದೇಶದಲ್ಲಿ ಕರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಮತ್ತೆ ಗರಿಗೆದರಿದ್ದು ತಾ. 18-12 -2021 ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಜರಗಿದ “ಬಾಕಿಲ್ ದೆಪ್ಪುಲೆ” ನಾಟಕವು ನೆರೆದ ನೂರಾರು ಕಲಾಭಿಮಾನಿಗಳ ಮನಸೂರೆಗೊಂಡಿತು.
ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಂಗವಾಗಿ ಬಹರೈನ್ ಬಂಟ್ಸ್ ಪರವಾಗಿ ಸಭಾಸದರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಬಳಿಕ , ಇದೇ ವೇದಿಕೆಯಲ್ಲಿ ಆಹ್ವಾನಿತ ಸಂಗೀತಕಾರ ಗುರು ಬಾಯಾರ್ ರವರನ್ನು ಶಾಲು, ಹಾರ, ಗೌರವ ಸ್ಮರಣಿಕೆಯೊಂದಿಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ನಾಟಕದ ಯಶಸ್ಸಿಗೆ ಕಾರಣರಾದ ದಾಮೋದರ ಆಚಾರ್ಯ, ಹರಿಣಿ ಉತ್ಕರ್ಷ್ ಶೆಟ್ಟಿ , ಕರುಣಾಕರ ಪದ್ಮಶಾಲಿ,ಗಣೇಶ್ ಮಾಣಿಲ, ಸುನಿಲ್ ಪೂಜಾರಿ, ರಾಮ್ ಪ್ರಸಾದ್ ಅಮ್ಮೆನಡ್ಕ ಮುಂತಾದವರನ್ನು ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಬಹರೈನ್ ಬಂಟ್ಸ್ ಮಾಜಿ ಅಧ್ಯಕ್ಷರುಗಳಾದ ಅಮರನಾಥ ರೈ, ಭರತ್ ಶೆಟ್ಟಿ , ಯಕ್ಷಧ್ರುವ ಪಟ್ಲ ಫೌಂಡೇಶನ್ ಸೌದಿ ಬಹರೈನ್ ಘಟಕದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕನ್ನಡ ಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್, ರಾಯಲ್ ತುಳುಕೂಟ ರೂವಾರಿ ನಾಗೇಶ್ ಶೆಟ್ಟಿ ಕರ್ಮಾರ್ ,ಬಹರೈನ್ ಬಿಲ್ಲವಾಸ್ ಅಧ್ಯಕ್ಷ ಸುರೇಂದ್ರ ಉದ್ಯಾವರ, ಇಂಡಿಯನ್ ಕ್ಲಬ್ ಮಾಜಿ ಅಧ್ಯಕ್ಷ ಆನಂದ್ ಲೋಬೋ.
ಹಿರಿಯ ಕನ್ನಡಿಗ ವಿಜಯ ನಾಯ್ಕ್ , ಬಹರೈನ್ ಕುಲಾಲ್ಸ್ ಅಧ್ಯಕ್ಷ ಗಣೇಶ್ ಮಾಣಿಲ ಮೊದಲಾದ ಗಣ್ಯ ಅತಿಥಿಗಳು ಪಾಲ್ಗೊಂಡು ಶುಭಹಾರೈಸಿದರು.ಶ್ರೀಮತಿ ಅಕ್ಷಿತಾ ಸುಧೀರ್ ಶೆಟ್ಟಿ ಹಾಗೂ ಅರ್ಚನಾ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಉಪಾಧ್ಯಕ್ಷರು ಅನಿಲ್ ನಾಯ್ಕ್ ಹಾಗೂ ಸಮಿತಿ ಪದಾಧಿಕಾರಿ ಗುರುರಾಜ್ ನಾಯ್ಕ್, ಜೀವಿತೇಶ್ ಪೂಂಜಾ ಸಂಪೂರ್ಣವಾಗಿ ಸಹಕರಿಸಿದರು.
ಬಂಟ್ಸ್ ಬಹರೈನ್ ಅಧ್ಯಕ್ಷ ಮೋಹನದಾಸ್ ರೈ ಎರುಂಬು ಮತ್ತು ಪದಾಧಿಕಾರಿಗಳು ಪ್ರಾಯೋಜಕರು ಹಾಗೂ ಕಲಾಪೋಷಕರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಜನಮನ ರಂಜಿಸಿದ “ಬಾಕಿಲ್ ದೆಪ್ಪುಲೆ” ನಾಟಕದ ಬಳಿಕ ಭಾಗವಹಿಸಿದ ಎಲ್ಲಾ ಕಲಾವಿದರಿಗೆ, ಸ್ವಯಂಸೇವಕರಿಗೆ ನೆನಪಿನಕಾಣಿಕೆ ನೀಡಲಾಯಿತು.