Wednesday, April 24, 2024
spot_imgspot_img
spot_imgspot_img

ಪೂರ್ಣವಾಗದ ಚಾರ್ಮಾಡಿ ಘಾಟ್ ರಸ್ತೆ ಕಾಮಗಾರಿ- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

- Advertisement -G L Acharya panikkar
- Advertisement -

ಚಿಕ್ಕಮಗಳೂರು: 2019ರ ಆಗಸ್ಟ್ ನಲ್ಲಿ ಸುರಿದ ಮಳೆಯಿಂದಾಗಿ ಚಾರ್ಮಾಡಿ ರಸ್ತೆಯಲ್ಲಾದ ಅನಾಹುತ ಇನ್ನೂ ದುರಸ್ತಿಯಾಗಿಲ್ಲ, ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಚಾರ್ಮಾಡಿ ಘಾಟ್ ರಸ್ತೆಯನ್ನ ಸಂಚಾರ ಮುಕ್ತಗೊಳಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

2019 ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಭಾಗ 45 ವರ್ಷಗಳಿಂದ ಕಾಣದಂತಹ ಮಳೆಯನ್ನ ಕಂಡು ಕಂಗಾಲಾಗಿದ್ದರು. ಸೇತುವೆಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಕ್ಕೆ ಲೆಕ್ಕವೇ ಇರಲಿಲ್ಲ. ರಸ್ತೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಅದರಲ್ಲೂ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ತೀವ್ರ ಕುಸಿತಕ್ಕೆ ಒಳಗಾಗಿತ್ತು. ಕೊಟ್ಟಿಗೆಹಾರದಿಂದ 22 ಕಿ.ಮೀ. ಅಂತರದ ಚಾರ್ಮಾಡಿ ಘಾಟ್ ಸುಮಾರು 20ಕ್ಕೂ ಹೆಚ್ಚು ಕಡೆ ಕುಸಿತ ಕಂಡಿತ್ತು. ಅಂದು ಸರ್ಕಾರ ಮೂರು ತಿಂಗಳಲ್ಲಿ ದುರಸ್ತಿ ಮಾಡುತ್ತೇವೆ ಎಂದಿತ್ತು. ಎರಡು ವರ್ಷವಾದರೂ ಚಾರ್ಮಾಡಿ ಘಾಟ್ ಸಂಚಾರ ಮುಕ್ತವಾಗಿಲ್ಲ.

ಜಿಲ್ಲೆ ಸೇರಿದಂತೆ ರಾಜ್ಯದ ಜನ ಚಾರ್ಮಾಡಿ ಘಾಟ್ ಮೇಲೆ ಅವಲಂಬಿತರಾಗಿದ್ದಾರೆ. ಆರೋಗ್ಯ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಮಂಗಳೂರು-ಉಡುಪಿ ಹೋಗಲು ಚಾರ್ಮಾಡಿ ಅತ್ಯಂತ ಸಹಾಯಕಾರಿ. ಆದರೆ ಈ ಬಹುಪಯೋಗಿ ರಸ್ತೆ ದುರಸ್ತಿಯಾಗುತ್ತಿದ್ದ ಕಾರಣ ಸಂಚಾರಕ್ಕೆ ಅವಕಾಶವಿರಲಿಲ್ಲ. ಈ ಮಾರ್ಗ ತಿಂಗಳುಗಟ್ಟಲೇ ಬಂದ್ ಆಗಿತ್ತು. ಮೂರೇ ತಿಂಗಳಲ್ಲಿ ಸಂಚಾರ ಮುಕ್ತ ಮಾಡುತ್ತೇವೆ ಎಂದಿದ್ದ ಸರ್ಕಾರ ಎರಡು ವರ್ಷವಾದರೂ ಕಾಮಗಾರಿ ಮುಗಿಸಿಲ್ಲ. ಇದು ಮಲೆನಾಡಿಗರು ಸೇರಿದಂತೆ ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.

ಈಗ ಮತ್ತೆ ಮಳೆಗಾಲದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮತ್ತೆ ಮಳೆಯಾದ್ರೆ ಇಡೀ ಚಾರ್ಮಾಡಿಯೇ ಇಲ್ಲದಂತಾಗುತ್ತೇನೋ ಅನ್ನೋ ಆತಂಕ ಸ್ಥಳೀಯರು ಹಾಗೂ ರಾಜ್ಯದ ಜನರನ್ನ ಕಾಡುತ್ತಿದೆ. ಸರ್ಕಾರದ ಮಂದಗತಿಯ ಕೆಲಸದ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಚಾರ್ಮಾಡಿ ಘಾಟ್‍ನಲ್ಲಿ ಕೆಲಸವೂ ಮಂದಗತಿಯಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಭಾರೀ ವಾಹಗಳಿಗೆ ಬ್ರೇಕ್ ಬಿದ್ದಿದೆ. ಈ ಎರಡೂ ಬೆಳೆವಣಿಗೆ ಕೂಡ ಮಲೆನಾಡಿಗರಿಗೆ ಮತ್ತಷ್ಟು ಸಮಸ್ಯೆ ತಂದಿದೆ. ಅದರಲ್ಲೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ಚಾರ್ಮಾಡಿಯಲ್ಲಿ ಸಂಚಾರಕ್ಕೆ ನಿಷೇಧವಿರೋದು ಕೂಡ ಜನಸಾಮಾನ್ಯರ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಸದ್ಯಕ್ಕೆ ಮಿನಿ ಬಸ್‍ಗಳ ಸಂಚಾರವಿದ್ದರೂ ಅದು ಸೂಕ್ತ ಸಮಯಕ್ಕೆ ಜನಸಾಮಾನ್ಯರ ಕಷ್ಟಕ್ಕೆ ಆಗುತ್ತಿಲ್ಲ. ಮಿನಿ ಬಸ್ ಕೂಡ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಇರೋದು. ಪ್ರತಿ 10 ನಿಮಿಷಕ್ಕೆ ಒಂದು ಬಸ್ಸಿದ್ದ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಗಂಟೆಗೊಂದು ಬಸ್ ಇರುವುದರಿಂದ ಜನ ತೀವ್ರ ಸಂಕಷ್ಟಕ್ಕೀಡಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಸೌಲಭ್ಯವಿಲ್ಲದ ಕಾರಣ ಜಿಲ್ಲೆಯ ಜನ ಮಂಗಳೂರು-ಉಡುಪಿ ಮೇಲೆ ಅವಲಂಬಿತರಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಯಾರಾದರೂ ಮಂಗಳೂರು-ಉಡುಪಿ ಹೋಗಬೇಕಂದರೆ ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಬೇಕೆಂಬುದು ಸ್ಥಳೀಯರು ಅಳಲು. ಆದ್ದರಿಂದ, ಸರ್ಕಾರ ಕೂಡಲೇ ಕೆಲಸ ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!