


ಚಿಕ್ಕಬಳ್ಳಾಪುರ: ನಗರದ ಶಾಂತಿನಗರ ಬಡಾವಣೆಯಲ್ಲಿ ವಾಸವಾಗಿದ್ದ ತೇಜಸ್ವಿನಿ ಎಂಬ ಮಹಿಳೆ ಬರ್ಬರ ಹತ್ಯೆಗೆ ಒಳಗಾದ ಘಟನೆ ಫೆ.25ರ ಬೆಳಗಿನ ಜಾವ ನಡೆದಿದೆ.
ತೇಜಸ್ವಿನಿ 20ನೇ ವಯಸ್ಸಿನಲ್ಲಿ ಮನೆಬಿಟ್ಟು ಓಡಿ ಹೋಗಿ ಪ್ರೇಮ ವಿವಾಹವಾಗಿದ್ದಳು. ಒಂದು ಮಗು ಜನಿಸಿದ ನಂತರ ಕುಟುಂಬ ಕಲಹ ಉಂಟಾಗಿ ಮೊದಲ ಗಂಡನಿಂದ ದೂರವಾಗಿ, ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಳು. ಎರಡನೇ ಸಂಬಂಧದಿಂದಲೂ ಒಂದು ಮಗು ಜನಿಸಿದ ಬಳಿಕ ಆತನಿಂದ ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.
ಈ ಸಂದರ್ಭದಲ್ಲಿ ಸಂದೀಪ್ ಎಂಬ ಯುವಕನೊಂದಿಗೆ ಪರಿಚಯ ಬೆಳೆಸಿ, ಲಿವ್-ಇನ್ ಸಂಬಂಧದಲ್ಲಿ ಇದ್ದಳು ಎನ್ನಲಾಗಿದೆ. ಫೆ.25ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳದ ವೇಳೆ ಸಂದೀಪ್ ತೇಜಸ್ವಿನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆಯ ಕುರಿತು ಮೃತಳ ಅಣ್ಣ ಗಿರೀಶ್ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಂದೀಪ್ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.








