


ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದ್ದು, ತಂದೆ-ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡಲ್ಲಿ ನಡೆದಿದೆ.
ನಗರದ ಪುನೀತ್ ಅಲಿಯಾಸ್ ಅಪ್ಪು ಎಂಬ ಯುವಕ ತನ್ನ ಪೋಷಕರು ಬಿಟ್ಟುಹೋಗಿದ್ದ ಎರಡು ಸಣ್ಣ ಮನೆಗಳ ಹಕ್ಕಿಗಾಗಿ ಹೋರಾಡುತ್ತಿದ್ದನು. ಆದರೆ ಆತನ ಸ್ವಂತ ಅತ್ತೆಯೇ ಈ ಆಸ್ತಿಗೆ ಅಡ್ಡಗಾಲಾಗಿದ್ದು, ಪುನೀತ್ ತಂದೆ ತಮ್ಮ ಬಳಿ ಹಣ ಪಡೆದಿದ್ದಾರೆ ಎಂಬ ಕಾರಣ ನೀಡಿ ಮನೆ ಬಿಟ್ಟುಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ನ್ಯಾಯ ಕೇಳಲು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಬಂದಿದ್ದ ಪುನೀತ್, ಅಲ್ಲಿಯೂ ತನಗೆ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಪೊಲೀಸರ ಕಣ್ಣೆದುರೇ ಬ್ಲೇಡ್ನಿಂದ ತನ್ನ ಕತ್ತು ಕುಯ್ದುಕೊಂಡಿದ್ದಾನೆ.
ತಕ್ಷಣವೇ ಪೊಲೀಸರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕುತ್ತಿಗೆಯ ಭಾಗದಲ್ಲಿ ತೀವ್ರ ಗಾಯವಾಗಿದ್ದ ಕಾರಣ ವೈದ್ಯರು 11 ಹೊಲಿಗೆಗಳನ್ನು ಹಾಕಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಪುನೀತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬೆನ್ನಲ್ಲೇ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಆತನ ಅತ್ತೆ ಶಿವಮೊಗ್ಗದಲ್ಲಿದ್ದು, ಈ ಸಂಬಂಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








