



ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಭರ್ಜರಿ ಜಯ ದಾಖಲಿಸಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಆಡಳಿತಕ್ಕೆ ಅಂತ್ಯ ಹಾಡಿರುವ ಯುಡಿಎಫ್ 10 ವರ್ಷದ ಬಳಿಕ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದ್ದು, 10 ವರ್ಷಗಳ ಎಲ್ಡಿಎಫ್ ಆಡಳಿತದ ನಂತರ ಕೇರಳದ ಜನರು ಈ ಬಾರಿ ಬದಲಾವಣೆಗೆ ಮತ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಪುತುಪಳ್ಳಿಯಲ್ಲಿ ಸುಮಾರು 52,907 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದಾರೆ. ಹರಿಪಾಡ್ ಕ್ಷೇತ್ರದಲ್ಲಿ ರಮೇಶ್ ಚೆನ್ನಿತ್ತಲ 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 23ರಲ್ಲಿ ಮುನ್ನಡೆ ಸಾಧಿಸಿ ಯುಡಿಫ್ ಗೆಲುವಿಗೆ ಬಲ ತುಂಬಿದೆ.
ಎಲ್ಡಿಎಫ್ಗೆ ಹಿನ್ನಡೆ:
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಡರಂಗ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆ ತೀವ್ರವಾಗಿ ತಟ್ಟಿದ್ದು, ಪ್ರಮುಖವಾಗಿ ಯುವಜನರಿಗೆ ಉದ್ಯೋಗಾವಕಾಶಗಳ ಕೊರತೆ ಮತ್ತು ಕೇರಳ ಕಾಂಗ್ರೆಸ್ ನಾಯಕ ಜೋಸ್ ಕೆ. ಮಾಣಿ ಅವರಂತಹ ಹಿರಿಯ ನಾಯಕರ ಸೋಲು ಎಲ್ಡಿಎಫ್ಗೆ ಭಾರೀ ಆಘಾತ ನೀಡಿದೆ.
ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯವನ್ನು ಈ ಫಲಿತಾಂಶ ಮತ್ತೆ ನೆನಪಿಸಿದ್ದು, ಕಾಂಗ್ರೆಸ್ ಮೈತ್ರಿಕೂಟದ ಸಂಘಟಿತ ಹೋರಾಟ ಮತ್ತು ಜನಕಲ್ಯಾಣ ಯೋಜನೆಗಳ ಭರವಸೆಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಯುಡಿಎಫ್ ಕೇಂದ್ರ ಕಚೇರಿಗಳಲ್ಲಿ ಈಗ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








