


ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಎರಡು ಜಿಂಕೆಗಳನ್ನು ಕೊಂದು ಮಾಂಸ ಮಾಡಿ ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಎಂ.ಸಿ.ಮುತ್ತಣ್ಣ ಅವರಿಗೆ ದೊರೆತ ಖಚಿತ ಮಾಹಿತಿ ಮೇಲೆ ಪೆರುಂಬಾಡಿ ಕಡೆಯಿಂದ ಬಿಟ್ಟಂಗಾಲದತ್ತ ಸಾಗುತ್ತಿದ್ದ ಇನೋವಾ (KA 02 MA 7011) ಕಾರನ್ನು ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಹೆಗ್ಗಳ ಗ್ರಾಮದಲ್ಲಿ ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ.
ದಾಳಿಯ ಸಂದರ್ಭ ಇನೋವಾ ಕಾರಿನಲ್ಲಿ ಎರಡು ಜಿಂಕೆಗಳ ಒಟ್ಟು 44 ಕೆ.ಜಿ. ಮಾಂಸ ಮತ್ತು ಜಿಂಕೆಗಳ ಎರಡು ತಲೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಬೇಟೋಳಿ ಗ್ರಾಮದ ನಿವಾಸಿ ವಿರಾಜಪೇಟೆ ಬೇಕರಿಯೊಂದರ ಮಾಲೀಕ ಎಂ.ಎಂ ಅಜೀಜ್ (45), ನೆಹರು ನಗರ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ.ಅಲಿಯಾಸ್ ಜಂಶೀರ್ (32) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಗಳಾಗಿರುವ ಇನ್ನುಳಿದ ಆರೋಪಿಗಳಾದ ಚಾಮಿಯಾಲ ಮೈತಾಡಿಯ ಅಜೀಜ್ (ಅಜ್ಜು), ಬೇಟೋಳಿ ಗುಂಡಿಗೆರೆಯ ಅಶ್ರಫ್, ಅಲಿಯಾಸ್ ಅಚ್ಚು ಮತ್ತು ಶಿಯಾಬ್ ಎಂಬುವವರು ತಲೆಮರಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಜಿಂಕೆಗಳ ಒಟ್ಟು 44ಕೆಜಿ ಮಾಂಸ ಮತ್ತು ಜಿಂಕೆಗಳ ಎರಡು ತಲೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಒಂಟಿ ನಳಿಕೆ ಕೋವಿ, ಎರಡು ಕತ್ತಿ, ಮೂರು ಚೂರಿ, ಕಲರ್ ಇನೋವಾ ಕಾರನ್ನು ವಶಕ್ಕೆ ಪಡೆದುಕ್ಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ತಿದ್ದುಪಡಿ ಕಾಯ್ದೆ 2023ರ 1,3,25 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.








