ಮಂಗಳೂರು : ದ.ಕ ಜಿಲ್ಲೆಯಲ್ಲಿ 24 ಗಂಟೆಗಳಿಗಿಂತಲೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಆಕ್ಸಿಜನ್ ಸಂಗ್ರಹದ ಬಗ್ಗೆ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದರು, ಶಾಸಕರೊಂದಿಗೆ ತುರ್ತು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ತಕ್ಷಣಕ್ಕೆ ಬೇಕಾಗುವಷ್ಟು ಆಕ್ಸಿಜನ್ ಲಭ್ಯವಿದ್ದು, ಯಾವುದೇ ಕೊರತೆಯಾಗದು. ಇದಲ್ಲದೇ ಇನ್ನಷ್ಟು ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಿಕೊಳ್ಳಲಾಗುತ್ತಿದೆ. 800 ಜಂಬೋ ಸಿಲಿಂಡರ್ ಆಕ್ಸಿಜನ್ ಲಿಕ್ವಿಡ್ ಕೇರಳದಿಂದ ಪೂರೈಕೆಯಾಗಲಿದೆ. ಅಲ್ಲದೆ ಬಳ್ಳಾರಿಯ ಜಿಂದಾಲ್ ಪ್ಲಾಂಟ್ನಿಂದಲೂ ಆಕ್ಸಿಜನ್ ತರಿಸಲಾಗುತ್ತಿದೆ.
ಜಿಲ್ಲೆಯ ಎಂಟು ಖಾಸಗಿ ಆಸ್ಪತ್ರೆಗಳ ಪ್ಲಾಂಟ್ಗಳಲ್ಲಿ ಆಕ್ಸಿಜನ್ ಸಂಗ್ರಹವಿದೆ. ಇದಲ್ಲದೆ ಮಂಗಳೂರು ನಗರದಲ್ಲಿ ಮೂರು ರೀಫಿಲ್ಲಿಂಗ್ ಘಟಕಗಳಲ್ಲಿ 10 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿವೆ. ಮಾತ್ರವಲ್ಲ ಪ್ರತೀ ವಾರ 25 ಟನ್ ಆಕ್ಸಿಜನ್ ಹೊರ ಜಿಲ್ಲೆಗಳಿಂದ ತರಿಸುತ್ತಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಲಭ್ಯವಿದೆ. ಹಾಗೂ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಜಿಲ್ಲೆಯಲ್ಲಿ 430 ಮಂದಿ ಆಕ್ಸಿಜನ್ ಯುಕ್ತ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯು ಮತ್ತು ವೆಂಟಿಲೇಟರ್ ನಲ್ಲಿ 200ಕ್ಕೂ ಮಿಕ್ಕಿ ಕೊರೋನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿ ವೆಂಟಿಲೆಟರ್ ಜೋಡಿಸಲು ತುರ್ತುಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಜಿಲ್ಲಾಧಿಕಾರಿ ರಾಜೇಂದ್ರ ಮಾಹಿತಿ ನೀಡಿದರು.