ದಾವಣಗೆರೆ: ಕೇರಳದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ವೈದ್ಯಕೀಯ ವಿದ್ಯಾರ್ಥಿನಿ ಬಲಿ ಕೇಸ್ ಇಡೀ ದೇಶದಲ್ಲಿ ಚರ್ಚೆಯನ್ನು ಹುಟ್ಟು ಹಾಕಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಇಂತದ್ದೇ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ದಾವಣಗೆರೆ ತಾಲೂಕಿನ ಹನುಮನ ಹಳ್ಳಿಯ ಕುಂದುವಾಡ ಗ್ರಾಮದ ರೂಪಾ(26) ಎಂಬವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೂಪಾಳ ಕುಟುಂಬಸ್ಥರು ವರದಕ್ಷಿಣೆ, ಮಾನಸಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ.
ರೂಪಾ ವಿವಾಹ ಹನುಮನ ಹಳ್ಳಿಯ ಜಯಪ್ರಕಾಶ್ ಎಂಬಾತನೊಂದಿಗೆ ಆರು ತಿಂಗಳ ಮೊದಲು ನಡೆದಿತ್ತು. ವಿವಾಹ ಸಂದರ್ಭದಲ್ಲಿ 9 ತೊಲೆ ಬಂಗಾರ, 1.5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ ಪತಿ ಜಯಪ್ರಕಾಶ್ ಮತ್ತು ಕುಟುಂಬದವರು ಹೆಚ್ಚಿನ ವರದಕ್ಷಿಣೆ ತರುವಂತೆ ರೂಪಾಗೆ ಕಿರುಕುಳ ನೀಡುತ್ತಿದ್ದರು.
ಮನೆಗೆ ಪೋನ್ ಮಾಡದಂತೆ ಮೊಬೈಲ್ ಕಿತ್ತುಕೊಂಡಿದ್ದ ಪತಿ ಮೊಬೈಲ್ಗೆ ಬರುತ್ತಿದ್ದ ಕರೆಗಳ ಬಗ್ಗೆ ಸಂಶಯ ಪಡುತ್ತಿದ್ದನು. ವರದಕ್ಷಿಣೆಗಾಗಿ ಮನೆಯವರೇ ಮಗಳನ್ನು ಹೊಡೆದು ನಂತರ ನೇಣಿಗೆ ಹಾಕಿದ್ದಾರೆ ಎಂದು ರೂಪಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.