


ಎರುಂಬು: “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ” ಇದು ಬಸವಣ್ಣನ ವಚನ. ಮನದೊಳಗಿನ ಕಸವ ದೂರಿಕರಿಸುವುದಕ್ಕೆ ಭಗವತ್ ಸಾನಿಧ್ಯ ಭೇಟಿಮಾಡುತ್ತೇವೆ. ಭಗವಂತನ ಪ್ರಿಯ ಸೇವೆ ಕೀರ್ತನೆ ಎನ್ನುವುದನ್ನು ಭಗವಂತನ ದಾಸರೆಲ್ಲರೂ ಹಾಡಿದ್ದಾರೆ. ಸುಮಾರು 26 ವರ್ಷಗಳಿಂದ ಎರುಂಬು ಶ್ರೀ ವಿಷ್ಣುಮೂರ್ತಿ (ಮಂಗಲ)ದೇವಸ್ಥಾನದಲ್ಲಿ ನಡೆಯುವ ಭಜನಾ ಕಾರ್ಯಕ್ರಮ ಪ್ರತಿ ವರ್ಷ ಡಿಸೆಂಬರ್ 31 ನೇ ತಾರೀಕಿನಂದು ನಡೆಯುತ್ತದೆ.

ಅರ್ಚಕ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ಇಂದು ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.30ವರೆಗೆ ನಾಮ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ ಗಣಪತಿ ಹವನದಿಂದ ತೊಡಗಿ, ನಾಮ ಸಂಕೀರ್ತನ ಕಾರ್ಯಕ್ರಮದ ಉದ್ಘಾಟನೆಯನ್ನು ಅವಿನಾಶ್ ದೀಕ್ಷಿತ್ ಅರ್ಚಕರು ಶ್ರೀ ಶಂಕರನಾರಾಯಣ ದೇವಸ್ಥಾನ ಎರುಂಬು ನೆರವೇರಿಸಿದರು.

ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ನಾಗಸನ್ನಿಧಿಯಲ್ಲಿ ನಾಗತಂಬಿಲ, ಆಶ್ಲೇಷ ಬಲಿ ಪೂಜೆ, ಅಶ್ವಥನಾರಾಯಣ ಪೂಜೆ, ಶ್ರೀ ವಿಷ್ಣು ಸಹಸ್ರನಾಮಪಾರಾಯಣ ನಡೆದು ಮಧ್ಯಾಹ್ನ ಬಲಿವಾಡು ಕೂಟ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ. ಸುಮಾರು 13 ಭಜನಾ ತಂಡಗಳು ಬೆಳಗ್ಗಿನಿಂದ ಸಂಜೆಯವರೆಗೆ ಭಜನಾ ಸಂಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
“ಯಾವುದು ನಿನ್ನ ಭಾಗ್ಯದಲ್ಲಿದೆಯೋ ಅದು ನಿನಗೆ ಸಿಕ್ಕೇ ಸಿಗುತ್ತದೆ ಯಾವುದು ನಿನ್ನದಲ್ಲವೂ ಅದು ನೀ ಎಷ್ಟೇ ಪ್ರಯತ್ನಿಸಿದರು ಸಿಗಲಾರದು ಚಿಂತೆ ಬಿಡು, ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸು ” ಎಂಬ ಅಪಾರ ಶ್ರದ್ದೆಯ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಅಧ್ಯಾತ್ಮ ಚಿಂತನೆ ಹಾಗೂ ಸಂಸ್ಕಾರಯುತ ಕಾರ್ಯದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.

ಜ. 14ರಂದು ಸಾರ್ವಜನಿಕ ದನು ಪೂಜೆ ನಡೆಯಲಿದೆ ಎಂದು ಅರ್ಚಕರು ತಿಳಿಸಿದರು.








