ವಿಟಿವಿ ಇಂಪಾಕ್ಟ್; ಸಸ್ಪೆಂಡ್ ಆಗೋ ಭಯದಲ್ಲಿ ಕದ್ರಿ ದೇವಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರ್..!
ಕುಕ್ಕೆ ಸುಬ್ರಮಣ್ಯ ದೇವಾಲಯದ ಶಿಷ್ಟಾಚಾರ ವಿಭಾಗದ ಸಿಬ್ಬಂದಿ ಗೋಪಿನಾಥ್ ನಂಬಿಷಾ ಅವರನ್ನು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ವರ್ಗಾವಣೆ ಮಾಡಿ ಮೌಖಿಕ ಆದೇಶ ನೀಡಿದ್ದರು, ಕದ್ರಿಗೆ ಕರ್ತವ್ಯಕ್ಕೆ ಹಾಜರಾಗದೇ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿಯೇ ಭದ್ರವಾಗಿ ನೆಲೆಯೂರಿದ್ದರು. ಈ ಬಗ್ಗೆ ವಿಟಿವಿ ಮಾಧ್ಯಮ ಅ.26ರಂದು ವರದಿ ಭಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗೋಪಿನಾಥ್ ನಂಬಿಷಾ ಅ.27ರಂದು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಏನಿದು ಪ್ರಕರಣ..?
ಕುಕ್ಕೆ ಸುಬ್ರಮಣ್ಯ ದೇವಾಲಯದ ಶಿಷ್ಟಾಚಾರ ವಿಭಾಗದ ಸಿಬ್ಬಂದಿ ಗೋಪಿನಾಥ್ ನಂಬಿಷಾಗೆ ಕೇರಳದ ಮಧೂರು ದೇವಾಲಯಕ್ಕೆ ವರ್ಗಾವಣೆ ಮಾಡಿ ಆಯುಕ್ತರು 11/09/2023ರಂದು ಆದೇಶ ಮಾಡಿದ್ದರು. ಆದೇಶ ಪ್ರಶ್ನಿಸಿ ಗೋಪಿನಾಥ್ ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಮದನಂತೇಶ್ವರ ದೇವಾಲಯದಲ್ಲಿ ಖಾಲಿ ಹುದ್ದೆ ಇಲ್ಲವೆಂಬ ಆಧಾರದಲ್ಲಿ ಅರ್ಜಿದಾರ ಗ್ರೂಪ್ ಸಿ ಶ್ರೇಣಿಯ ಸಿಬ್ಬಂದಿ ಗೋಪಿನಾಥ್ ಅವರನ್ನು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ವರ್ಗಾವಣೆ ಮಾಡಿ ಮೌಖಿಕ ಆದೇಶ ನೀಡುವ ಮೂಲಕ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ನೀಡಿತ್ತು.
ಆದರೆ ನ್ಯಾಯಪೀಠ ನೀಡಿದ ವರ್ಗಾವಣೆ ಆದೇಶಕ್ಕೆ ಬೆಲೆ ನೀಡದೇ ಗೋಪಿನಾಥ್ ಅವರು ಕುಕ್ಕೆ ದೇವಸ್ಥಾನದಲ್ಲೇ ಭದ್ರವಾಗಿ ನೆಲೆಯೂರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಕ್ತ ಸಮೂಹವು ವರ್ಗಾವಣೆಯಾದ ಗೋಪಿನಾಥ್ ಅವರಿಗೆ ಮುಜರಾಯಿ ಆಯುಕ್ತರು, ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಯವರು ಬೆಂಬಲ ನೀಡುತ್ತಿರುವ ಕಾರಣದಿಂದಾಗಿಯೇ ಈತ ನ್ಯಾಯಾಲಯದ ಆದೇಶವನ್ನೂ ಕ್ಯಾರ್ ಮಾಡದೇ ಅಪಚಾರ ಎಸಗುತ್ತಿದ್ದಾರೆಂದು ಆರೋಪಿಸಿದ್ದರು.