ದಕ್ಷಿಣ ಕನ್ನಡ: ಈ ಹಿಂದಿದ್ದ ಬಿಜೆಪಿ ಸರ್ಕಾರ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ನೀಡಿದ್ದ ನೌಕರಿಗೆ ಈಗ ಕುತ್ತು ಬಂದಿದೆ. ಸರ್ಕಾರ ಬದಲಾದ ಬೆನ್ನಲ್ಲೇ ನೂತನ ಕುಮಾರಿ ಅವರ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿದೆ.
ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ನೂತನ ಕುಮಾರಿ ಅವರ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿದೆ. ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ ಬಳಿಕ, ಪ್ರವೀಣ್ ನೆಟ್ಟಾರು ಪತ್ನಿ ಅವರಿಗೆ ಮಾನವೀಯ ನೆಲೆಯಲ್ಲಿ ಸಿಎಂ ಅವರ ವಿಶೇಷಾಧಿಕಾರದ ಬಳಸಿ ಜಿಲ್ಲಾಧಿಕಾರಿ ಕಛೇರರಿಯಲ್ಲಿ ಕೆಲಸ ಕೊಡಲಾಗಿತ್ತು. 2022 ಸೆ. 22 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹೊರಡಿಸಿದ್ದ ಆದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಹಿರಿಯ ಸಹಾಯಕ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೂತನ ಕುಮಾರಿ ಅವರನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದು ಹಾಕಲಾಗಿದೆ. ಸರ್ಕಾರ ಬದಲಾದ್ದರಿಂದ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದುಗೊಳ್ಳುವುದು ಕ್ರಮ ಹೀಗಾಗಿ ನೇಮಕಾತಿ ರದ್ದಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ
ನೂತನ ಕುಮಾರಿ ಯವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಮಾಧ್ಯಮ ವರದಿಯನ್ನು ನೋಡಿದ ಬಳಿಕ ನನಗೆ ತಿಳಿದಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಜೊತೆ ಮಾತನಾಡುತ್ತೇನೆ. ಹಿಂದಿನ ಬಿಜೆಪಿ ಸರ್ಕಾರ ಸರಿಯಾದ ರೀತಿ ನೇಮಕಾತಿ ಮಾಡಿಕೊಳ್ಳದೇ ಪ್ರಸ್ತಕ ಮುಖ್ಯಮಂತ್ರಿ ಇರುವ ತನಕ ಇಲ್ಲವೇ ಮುಂದಿನ ಆದೇಶದವರೆಗೆ ಎಂದು ನಮೂದಿಸಿದ್ದು, ಇದು ಬಿಜೆಪಿ ಸರ್ಕಾರ ತಪ್ಪಾಗಿದೆ. ನಾನು ಈ ಕೂಡಲೇ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಶೀಘ್ರ ಮರುನೇಮಕಾತಿ ಬಹ್ಹೆ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ರವಿಕುಮಾರ್ ’ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಿರುವ ಆದೇಶದ ಬಗ್ಗೆ ನೂತನ ಕುಮಾರಿಯವರು ಗಮನಕ್ಕೆ ತಂದಿದ್ದಾರೆ. ಅವರನ್ನು ಮತ್ತೆ ಮುಂದುವರಿಸುವ ಬಗ್ಗೆ ತಕ್ಷಣವೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು’ ಎಂದಿದ್ದಾರೆ.