ನವದೆಹಲಿ: ಪಾಕಿಸ್ತಾನಕ್ಕೆ ಕಾಲಿಡದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕ್ ಸಮಾಜದ ದುರಂತ ಸನ್ನಿವೇಶಗಳ ಕುರಿತು ಓದಿದಾಗ ನಾನು ನನ್ನನ್ನು ಭಾರತೀಯ ಮುಸಲ್ಮಾನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಸೇರಿ ರಾಜ್ಯಸಭೆಯಿಂದ ಮಂಗಳವಾರ (ಫೆ.9) ನಾಲ್ವರು ನಿವೃತ್ತಿಯಾಗುತ್ತಿದ್ದು, ಈ ವೇಳೆ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದರು. ‘ನನ್ನನ್ನ ಅತ್ಯಂತ ಬಾವನಾತ್ಮಕವಾಗಿ ಬೀಳ್ಕೊಟ್ಟ ಪ್ರಧಾನಿ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಮೋದಿ ಅವರ ಭಾವುಕ ಭಾಷಣದಿಂದ ಎದೆ ತುಂಬಿ ಬಂದಿದೆ ಎಂದು ಗುಲಾಂ ನಬಿ ಹೇಳಿದರು.
ನನ್ನ ಬೀಳ್ಕೊಡುಗೆ ಇಷ್ಟೊಂದು ಭಾವನಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನೀವೆಲ್ಲರೂ ನನಗೆ ತೋರಿದ ಗೌರವ ಹಾಗೂ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಗುಲಾಂ ನಬಿ ಆಜಾದ್, ಅಟಲ್ಜೀ ಅವರಿಂದ ನಾನು ಸಾಕಷ್ಟು ವಿಷಯ ಕಲಿತಿದ್ದೇನೆ. ಬಿಕ್ಕಟ್ಟು ಯಾವುದೇ ಇರಲಿ, ಅದನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಕೂಡ ಅವರಿಂದಲೇ ಕಲಿತಿರುವುದು ಎಂದು ಹೇಳಿದರು.
ಮೋದಿಯವರೂ ಅಷ್ಟೇ, ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎನ್ನುವುದನ್ನು ತೋರಿಸಿಕೊಟ್ಟವರು. ಎಷ್ಟೋ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾವಿಬ್ಬರೂ ವಾಗ್ಯುದ್ಧ ಮಾಡಿದ್ದಿವು.
ಆದರೆ ಅದು ರಾಜಕೀಯ. ಅಲ್ಲಿ ಹಾಗೆಯೇ ಇರಬೇಕು. ಆದರೆ ಮೋದಿಯವರು ಎಂದಿಗೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ಅವರ ವಿರುದ್ಧ ರಾಜಕೀಯವಾಗಿ ಮಾತನಾಡಿದಾಗಲೆಲ್ಲ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುವವರು. ಇದು ಒಳ್ಳೆಯ ರಾಜಕಾರಣಿಯ ಗುಣ ಎಂದು ಶ್ಲಾಘಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ನಿನ್ನೆಯಷ್ಟೇ ಆಜಾದ್ ಅವರು ಹೊಗಳಿದ್ದ ಅವರು, ಸಹಕಾರದಿಂದ ದೇಶ ನಡೆಯಬೇಕೇ ವಿನಾ ಜಗಳದಿಂದಲ್ಲ. ಜಗಳ ಮಾಡಿ ಸುಖಾಸುಮ್ಮನೇ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾ ಕುಳಿತರೆ ದೇಶ ನಡೆಯುವುದಿಲ್ಲ ಎಂದು ಸಲಹೆ ನೀಡಿದರು.