


ಮಾಣಿ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು,ಎಲ್ಲಾ ತಾತ್ಕಾಲಿಕ ಕ್ರಾಸಿಂಗ್ ಬಂದ್ ಮಾಡಲಾಗುತ್ತಿದೆ. ಆದರೆ ಮಾಣಿ ಮತ್ತು ದಾಸಕೋಡಿ ಮಧ್ಯೆ ಸೂರಿಕುಮೇರು ಬರಿಮಾರು ಭಾಗದ ಜನರಿಗಾಗಿ ಒಂದು ಪರ್ಮನೆಂಟ್ ಕ್ರಾಸಿಂಗ್ ನೀಡುವಂತೆ ಒತ್ತಾಯಿಸಿ ಕಳೆದ ತಿಂಗಳು ಸೂರಿಕುಮೇರು ಜಂಕ್ಷನ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಹೆದ್ದಾರಿ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಂತರ ಬೆಳವಣಿಗೆಯಲ್ಲಿ ಹಳೀರದ ದಾರುಲ್ ಇರ್ಶಾದ್ ವಿದ್ಯಾ ಸಂಸ್ಥೆಯ ಬಳಿ ಇದ್ದ ಕ್ರಾಸಿಂಗ್ ಕೂಡಾ ಬಂದ್ ಮಾಡಲಾಗಿದೆ.

ಇದರಿಂದ ಈ ಭಾಗದ ಜನರು ಎರಡು ಮೂರು ಕಿಲೋಮೀಟರ್ ಸುತ್ತು ಬಂದು ತಮ್ಮ ಮನೆ ಅಂಗಡಿ ಇನ್ನಿತರ ಕಡೆ ತಲುಪಬೇಕಾದ ಸಂಕಷ್ಟ ಎದುರಾಗಿದೆ. ಅಗತ್ಯವಿರುವ ಕಡೆ ಕೂಡಾ ಕ್ರಾಸಿಂಗ್ ನೀಡದೆ, ಜನರನ್ನು ರಾಂಗ್ ಸೈಡ್ ಗಳಲ್ಲಿ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಉಂಟುಮಾಡಿಕೊಡುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟವರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಈ ಭಾಗದ ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ಅಸಹನೆ ವ್ಯಕ್ತ ಪಡಿಸಿದರು.








