ಹಾಸನ(ನ.1): ಶನಿವಾರ ರಸ್ತೆಯಲ್ಲಿ ನಡೆದ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ್ದು ರಸ್ತೆ ಎನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಪತ್ನಿಯ ಕತ್ತನ್ನೇ ಸೀಳಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಹೊಳಬಿಲ್ಲೆನಹಳ್ಳಿಯ ಶಾಲಿನಿ ಕೊಲೆಯಾದವಳು. ಪತಿ ಪುನೀತ್ ಕೊಲೆ ಆರೋಪಿ. ಈ ದಂಪತಿಗೆ ಒಂದು ವರ್ಷದ ಗಂಡು ಮಗು ಇದೆ.
ಶಾಲಿನಿಯನ್ನು ಎರಡು ವರ್ಷದ ಹಿಂದೆ ಕವಿನಕೋಟೆ ಗ್ರಾಮದ ಪುನೀತ್ ಮದುವೆಯಾಗಿದ್ದ. ಶನಿವಾರ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆ ಮಧ್ಯೆ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ಪುನೀತ್ ಪತ್ನಿ ಶಾಲಿನಿಯ ಕುತ್ತಿಗೆಯನ್ನೇ ಸೀಳಿದ್ದಾನೆ. ಈ ವೇಳೆ ಶಾಲಿನಿಯ ರಕ್ಷಣೆಗೆ ಬಂದ ಗ್ರಾಮಸ್ಥರ ಮೇಲೂ ಪುನೀತ್ ಹಲ್ಲೆಗೆ ಯತ್ನಿಸಿದ್ದಾನೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.