ಹೈದರಾಬಾದ್: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣ ದೇಶದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆರೋಪಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರೋಪಿ ಪಲ್ಲಕೊಂಡ ರಾಜು (30) ಎನ್ನಲಾಗಿದೆ. ಆತನ ಮೃತದೇಹ ಘಣಪುರ್ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.
ಸೆ. 9ರಂದು 6 ವರ್ಷದ ಬಾಲಕಿ ಸೈದಾಬಾದ್ ನ ಸಿಂಗ್ರೌಣಿ ಕಾಲನಿಯಲ್ಲಿರುವ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಮರುದಿನವೇ ಆಕೆಯ ಮೃತದೇಹವು ಬೆಡ್ ಶೀಟ್ ನಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ಪಕ್ಕದ ಮನೆಯಲ್ಲಿ ಪತ್ತೆಯಾಗಿತ್ತು . ಆ ಬಳಿಕ ಆಕೆಯ ಮೇಲೆ ಕಾಮುಕ ಅಟ್ಟಹಾಸ ನಡೆಸಿ ಕೊಲೆ ಮಾಡಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆರೋಪಿ ಪರಾರಿಯಾಗಿದ್ದ .
ಆತನನ್ನು ಬಂಧನವಾದ ಕೂಡಲೇ ಎನ್ಕೌಂಟರ್ ಮಾಡುವಂತೆ ತೆಲಂಗಾಣ ಕಾರ್ಮಿಕ ಸಚಿವ ಮಲ್ಲರೆಡ್ಡಿ ಒತ್ತಾಯಿಸಿದ್ದರು. ಇದರ ನಡುವೆ ಆರೋಪಿಯ ಸುಳಿವು ನೀಡಿದವರಿಗೆ ಸೈಬರಾಬಾದ್ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಆದರೆ, ಇದೀಗ ಆರೋಪಿ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.