ವಿಟ್ಲ: ಪಿಕಪ್ ವಾಹನದಲ್ಲಿ ಕೇರಳಕ್ಕೆ ಅಕ್ರಮವಾಗಿ ವಧೆ ಮಾಡಲು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳು, ಒಂದು ದನ, ಒಂದು ಕರು, ಹಾಗೂ ವಾಹನವನ್ನು ವಶಕ್ಕೆ ಪಡೆದ ಘಟನೆ ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ನಲ್ಲಿ ನಡೆದಿದೆ.
ಮಂಜೇಶ್ವರ ಬಾಡೂರು ಮಾಕೂರಮೂಲೆ ಮನೆ ನಿವಾಸಿ ಅಬ್ದುಲ್ ರಜಾಕ್. ಎಂ (40), ಮಂಜೇಶ್ವರ ದೇರಡ್ಕ ನಿವಾಸಿ ಮಹಮ್ಮದ್ ರಫೀಕ್ (29) ಬಂಧಿತ ಆರೋಪಿಗಳು. ವಿಟ್ಲ ಎಸೈ ವಿನೋದ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ಎಂಬಲ್ಲಿ ಮಹಿಂದ್ರ ಪಿಕಪ್ ವಾಹನದಲ್ಲಿ ಆರೋಪಿಗಳಾದ ಅಬ್ದುಲ್ ರಜಾಕ್ ಎಂ ಮತ್ತು ಮಹಮ್ಮದ್ ರಪೀಕ್ ಎಂಬವರು ಅಕ್ರಮವಾಗಿ ಯಾವುದೇ ಪರವಾಣಿಗೆ ಇಲ್ಲದೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.