



ಭಾರತದ ಸ್ವಾತಂತ್ರೋತ್ಸವದ ನಿಜ ಸಂಭ್ರಮ 1947 ರದ್ದು. ದಾಸ್ಯ ಮುಕ್ತಿಗೆ ಪಟ್ಟ ವಿಭಿನ್ನ ಚಳವಳಿಗಳು, ಅಸಹಕಾರ ಆಂದೋಲನಗಳು, ಅಹಿಂಸೆ ಎಂಬ ಕ್ರಿಯಾಶೀಲತೆಗೆ ಪಡೆದ ಬೂಟಿನೇಟುಗಳು, ಜೈಲುವಾಸ, ವಿರೋಧಿ ದೇಶಗಳ ಹಿಂಸಾತ್ಮಕ ನೇಣುಗಂಬಗಳಿಗೆ ಕೊರಳೊಡ್ಡಿದ ಯುವ ಹಠಮಾರಿ ಜೀವಗಳು ಎಂದೂ ಮರೆಯಬಾರದ ತ್ಯಾಗಗಳು. ಇವೆಲ್ಲದರ ಸೃಜನಾತ್ಮಕ ಒಮ್ಮತದ ಫಲ ಭಾರತದ ಸ್ವಾತಂತ್ರ್ಯ. ರೈತ ನೀಡುತ್ತಿರುವ ಅನ್ನ, ದೇಶ ಕಾಯೋ ಯೋಧರ ಕೃಪಾಶ್ರಿತದಲ್ಲಿ ಬದುಕುವ ನಾವು 78 ವರ್ಷಗಳ ಹಿಂದಿನ ನಮ್ಮವರ ಒಮ್ಮತದ ಶ್ರಮವನ್ನು ನೆನಪಿಸುವ, ಭಾರತ ಮಾತೆಗೆ ತ್ಯಾಗದ ಬಲಿದಾನ ನೀಡಿದ ಜೀವ ಗಳಿಗೆ ಸಲ್ಲಿಸುವ ನಮನ ಅತ್ಯಂತ ಅಮೂಲ್ಯವಾದುದು.

ಸ್ವಾತಂತ್ರೋತ್ಸವ ದಿನವೊಂದರ ಸಿಹಿ ಹಂಚಿಕೆಯೊಂದಿಗೆ ಮುದ್ದು ಮಕ್ಕಳ ಸಂಭ್ರಮದ ನಗುವಿನ ಜತೆ ದಾಸ್ಯ ಮುಕ್ತಿಗಾಗಿ ನಡೆಸಿದ ಕರಾಳ ದಿನಗಳ ನೆನಪು ಮಾಡಿಸುವ ಯತ್ನವಿರಲಿ. ಇದಕ್ಕಾಗಿ ಕೇವಲ ಪ್ರಚಾರ ದಲ್ಲಿರುವ ಮಾತ್ರವಲ್ಲ ತೆರೆ ಮರೆಯಲ್ಲಿ ಶ್ರಮವಿತ್ತು ಪ್ರಾಣ ತೆತ್ತ ಜೀವಗಳೂ ಇದ್ದವುಗಳೆಂಬ ಮಾಹಿತಿ ಹಂಚೋಣ. ಇಂದು ದೇಶ ಕೃಷಿ ಕ್ರಾಂತಿಯಲ್ಲಿ, ಕೈಗಾರಿಕೀಕರಣ, ಸೇವಾವಲಯಗಳಲ್ಲಿ ಗಜಾoತರ ಅಭಿವೃದ್ಧಿ ಸಾದಿಸಿದ್ದೇವೆ. ಸ್ವಾಸ್ತ್ಯ ಜೀವನ, ಸ್ವಚ್ಛತೆ, “ವಸುದೈವ ಕುಟುಂಬಕಂ” ಎಂಬಂತಹ ಅತಿ ಅಗತ್ಯತೆಯ ಪ್ರತಿಜ್ಞೆಯ ಅಗತ್ಯತೆ ಇದ್ದರೂ ನಮ್ಮ ದೇಣಿಗೆ, ಸ್ವತಂತ್ರ ಭಾರತಕ್ಕೆ ಅಂದು ಮಾಡಿದ ತ್ಯಾಗಕ್ಕೆ ಇನ್ನೂ ಸಮವಾಗದಿರುವುದು ಪ್ರಾರಬ್ಧ. ನಮ್ಮವರೊಳಗೆ ಪರಕೀಯತೆಯ ಭಾವ ಐಕ್ಯತೆಯನ್ನು ಕಸಿಯುದೆಯೇನೋ? ಎನಿಸುತಿದೆ. ಮೋಹ, ಮದ, ಮತ್ಸರ ಭಾವ, ಎಲುಬಿಲ್ಲದ ನಾಲಿಗೆಯ ವಕ್ರ ಮಾತು ಆರೋಗ್ಯಕರ ಜನ ಜೀವನಕ್ಕೆ ಅಡ್ಡಿಯಾಗುತಿದೆ. ಇನ್ನು ನಮ್ಮ ಹೋರಾಟ ಇದೆಲ್ಲದರಿಂದ ಸ್ವತಂತ್ರರಾಗುವುದು. ದೇಶ ನಮ್ಮದೆಂಬ ಒಲವಿನ ಜೊತೆ ಸನಾತನತೆಯ ಉಳಿಯುವಿಕೆಗೆ ಶ್ರಮ ಪಡುವುದು. ಸನಾತನ ಸಂಸ್ಕೃತಿ, ಹಾಕಿಕೊಟ್ಟ ಸಂಸ್ಕಾರ ಉಳಿಸುತ್ತಾ “ವಿಶ್ವದ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಸಂದೇಶಗಳು ಹರಿದು ಬರಲಿ ಅವುಗಳನ್ನು, ಉಳಿಸಬೇಕಷ್ಟೆ” ಎಂಬ ಧ್ಯೇಯದೊಂದಿಗೆ ಬದುಕುವುದೇ ನಮ್ಮ ದೇಶ ಉಳಿಸುವ ದಿವ್ಯ ಮಂತ್ರವಾಗಲಿ. ಇದೆ ನಾವು ಪಡೆಯಬೇಕಾದ ವ್ಯಕ್ತಿಗತ ತಂತ್ರ… ಅದೇ ದೇಶ ಉಳಿಸುವ ಸ್ವಾತಂತ್ರ್ಯ. 79 ನೇ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳು.
ರಾಧಾಕೃಷ್ಣ ಎರುಂಬು “ರಾಮ್ದೇವ್ ” ವಿಟ್ಲ








