ಕಡಬ: ಇಂಟರ್ನೆಟ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ತೊಡಕುಂಟಾಗಿ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಲ್ಯಾಪ್ಟಾಪ್ ಜತೆ ಗುಡ್ಡದ ಮೇಲೆ ತೆರಳಿ ಇಂಟರ್ನೆಟ್ ಸಂಪರ್ಕಕ್ಕಾಗಿ ಪ್ರಯತ್ನ ನಡೆಸಿದರೂ ವಿಫಲವಾದ ಘಟನೆ ಕಡಬ ತಾಲೂಕಿನ ಗ್ರಾಮೀಣ ಭಾಗವಾದ ಕೊಂಬಾರಿನಲ್ಲಿ ಶುಕ್ರವಾರ ಸಂಭವಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ರೂಪಿಸಿದ ನಿಯಮಾಳಿಯಂತೆ ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ದಿನಸಿ ವಸ್ತುಗಳ ಖರೀದಿಗೆ ಅವಕಾಶವಿದ್ದರೂ, ಕೊಂಬಾರು ಗ್ರಾಮದ ಕೆಂಜಾಳದ ನ್ಯಾಯಬೆಲೆ ಅಂಗಡಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಪಡಿತರ ವಿತರಿಸಲು ಸಾಧ್ಯವಾಗಿಲ್ಲ.
ತಿಂಗಳ ಕೊನೆಯ ದಿನವಾದ್ದರಿಂದ ತಿಂಗಳ ಕೋಟಾದ ಪಡಿತರ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರೂ ಬರಿಗೈಯಲ್ಲಿ ಹಿಂದಿರುಗಬೇಕಾಯಿತು.
ಬಿಎಸ್ಎನ್ಎಲ್ ಹಾಗೂ ಏರ್ಟೆಲ್ ನೆಟ್ವರ್ಕ್ ಕಟ್ ಆಗಿದ್ದರಿಂದ ಪಡಿತರ ಪಡೆಯಲು ಬಂದ ಗ್ರಾಹಕರು ಪಡಿತರ ಸಿಗದೆ ಪರದಾಡಿದ್ದಾರೆ.
ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಲ್ಯಾಪ್ಟಾಪ್ ಹಿಡಿದುಕೊಂಡು ಗುಡ್ಡಕ್ಕೆ ಹತ್ತಿ ನೆಟ್ವರ್ಕ್ಗೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಗ್ರಾಮವಾಗಿರುವ ಕೊಂಬಾರಿನ ಕೆಂಜಾಳದಲ್ಲಿ ಎದುರಾಗಿರುವ ನೆಟ್ವರ್ಕ್ ಸಮಸ್ಯೆಯನ್ನು ನೀಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.