



ಕಣ್ಣೂರು: ಮಾದಕ ವ್ಯಸನಕ್ಕೆ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕೇಳಕಂನ ಕಾಣಿಚಾರ್ನಲ್ಲಿ ಶುಕ್ರವಾರ(ಎ.24) ರಾತ್ರಿ ನಡೆದಿದೆ.
ತನ್ನಿಕುನ್ನು ನಿವಾಸಿ ಗೀತಮ್ಮ ಕೊಲೆಯಾದ ದುರ್ದೈವಿ. ಕ್ರಿಸ್ಟಿ ಕೃತ್ಯ ಎಸಗಿದ ಪಾಪಿ ಮಗ.
ಕ್ರಿಸ್ಟಿ ಬೆಂಗಳೂರಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದನು. ಆದರೆ ಮಾದಕ ವ್ಯಸನದ ಕಾರಣದಿಂದ ಓದನ್ನು ಅರ್ಧಕ್ಕೆ ಬಿಟ್ಟು ಒಂದು ವಾರದ ಹಿಂದೆಯಷ್ಟೇ ಊರಿಗೆ ವಾಪಾಸಾಗಿದ್ದ.
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ತಾಯಿ-ಮಗನ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಕ್ರಿಸ್ಟಿ, ಗೀತಮ್ಮರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಕ್ರಿಸ್ಟಿ ನೆರೆಮನೆಯವರ ಸ್ಕೂಟರ್ ಹತ್ತಿ ನೇರವಾಗಿ ಕೇಳಕಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಗೀತಮ್ಮ ಸಮಾಜ ಸೇವಕಿಯಾಗಿದ್ದರು. ಅಲ್ಲದೆ, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯ ಸದಸ್ಯೆ ಆಗಿದ್ದ ಅವರು ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು. ಮಾದಕ ವ್ಯಸನ ಹಾಗೂ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.








