ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಗೇಟ್ಪಾಸ್ ನೀಡಿ ಅವರ ಜಾಗಕ್ಕೆ ರಣದೀಪ್ ಸಿಂಗ್ ಸರ್ಜೆವಾಲರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ರಣದೀಪ್ ಸಿಂಗ್ ಸುರ್ಜೆವಾಲಾರನ್ನು ನೇಮಕ ಮಾಡಿ ಇಂದು ಎಐಸಿಸಿ ಆದೇಶ ಹೊರಡಿಸಿದೆ. ಇತ್ತ ತಮಿಳುನಾಡು/ಪುದುಚೇರಿ/ ಗೋವಾ ರಾಜ್ಯದ ಉಸ್ತುವಾರಿಯನ್ನಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಖಾಯಂ ಆಹ್ವಾನಿತರಾಗಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮುಂದುವರಿದಿದ್ದು, ಹೊಸದಾಗಿ ದಿನೇಶ್ ಗುಂಡೂರಾವ್, ಎಚ್.ಕೆ ಪಾಟೀಲ್ ಅವಕಾಶ ನೀಡಲಾಗಿದೆ. ಎಐಸಿಸಿ ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ಕೃಷ್ಣ ಬೈರೇಗೌಡ ಅವರಿಗೆ ಅವಕಾಶ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷರ ನೇತೃತ್ವದ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಖಾಯಂ ಆಹ್ವಾನಿತರಾಗಿ ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್, ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಬಿ.ವಿ. ಶ್ರೀನಿವಾಸ್ ಅವಕಾಶ ಪಡೆದಿದ್ದಾರೆ.