ಮಕ್ಕಳಿಗೆ ಆಸ್ತಿ ಮಾಡಿ ಇಡೋದು ಬೇಡ, ಮಕ್ಕಳನ್ನೇ ತಮ್ಮ ಆಸ್ತಿಯನ್ನಾಗಿಸಿ: ಶ್ರೀ ಕೃಷ್ಣ ಗುರೂಜಿ
ಕೇಪು: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಕೇಪುವಿನ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿಕೋತ್ಸವವು ಶ್ರೀ ದುರ್ಗಾಮಂದಿರದಲ್ಲಿಬಹಳ ವಿಜೃಂಭಣೆಯಿಂದ ನಡೆಯಿತು.
ದುರ್ಗಾ ಮಿತ್ರ ವೃಂದದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಗುರೂಜಿಯವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ವ ಧರ್ಮದವರನ್ನು ಗೌರವಿಸಿ, ಮಕ್ಕಳನ್ನು ಒಗ್ಗೂಡಿಸಿ ಕಾರ್ಯಕ್ರಮ ಮಾಡಿದ್ದು ಮನಸಿಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ಸಂಸ್ಕಾರ ಸಿಗುವುದು ಮನೆಯಿಂದ, ಉತ್ತಮ ಸಂಸ್ಕಾರದಿಂದ ಸಮಾಜದಲ್ಲಿ ಯೋಗ್ಯರಾಗಿ ಬೆಳೆಯಲು ಸಾಧ್ಯವಿದೆ.ಜೀವಿತಾವಧಿಯಲ್ಲಿ ನಾವೇನು ಮಾಡಿದ್ದೇವೆ ಅನ್ನೋದು ಮುಖ್ಯ ಅಲ್ಲ. ಹೇಗೆ ಬದುಕಿದ್ದೇವೆ ಅನ್ನೋದು ಮುಖ್ಯ.. ಮಕ್ಕಳಿಗೆ ಆಸ್ತಿ ಮಾಡಿ ಇಡೋದು ಬೇಡ.. ಮಕ್ಕಳನ್ನೇ ತಮ್ಮ ಆಸ್ತಿಯನ್ನಾಗಿ ಮಾಡೋಣ. ಪ್ರತಿ ಮನೆಯಲ್ಲಿ ಭಜನೆಯ ಪದ್ಧತಿ ಬೆಳೆದು ಬರಲಿ. ಮೊಬೈಲ್ ಹಾವಳಿಯಿಂದ ಮಕ್ಕಳನ್ನು ದೂರ ಇರಿಸೋಣ, ದುರ್ಗಾ ಮಿತ್ರ ವೃಂದ ಇನ್ನಷ್ಟು ಖ್ಯಾತಿಯನ್ನು ಗಳಿಸಲಿ, ಒಗ್ಗಟ್ಟಿನಿಂದ ಸಂಸ್ಥೆ ಮುನ್ನಡೆಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಜೇನು ಕೃಷಿಕ ರಾಜ್ಯ ಪ್ರಶಸ್ತಿ ವಿಜೇತ ಸುಧಾಕರ ಪೂಜಾರಿ ಬಡೆಕೋಡಿ ಹಾಗೂ ಅಡ್ಯನಡ್ಕ ಸಿ ಎಂ ಸೌಂಡ್ಸ್ ನ ಮಾಲಕರಾದ ಸಿದ್ದಿಕ್ ಅಡ್ಯನಡ್ಕಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಡ್ಯ ವಿಭಾಗ ಅಂಚೆ ಅಧೀಕ್ಷಕರಾದ ಲೋಕನಾಥ್ ಎಂ ಶ್ರೀಮತಿ ಕವಿತಾ ಅಶೋಕ್ ಇರಾಮೂಲೆ, ಉದ್ಯಮಿ ಗೋವಿಂದ ರಾಯ್ ಶೆಣೈ ಅಡ್ಯನಡ್ಕ, ಜಗಜೀವನ್ ರಾಮ್ ಶೆಟ್ಟಿ ಬೇಡೆಮಾರ್, ಪುರುಷೋತ್ತಮ್ ಗೌಡ ಕಲ್ಲಂಗಳ, ರಶೀದ್ ಮೈರ ಇವರು ಉಪಸ್ಥಿತರಿದ್ದರು. ಕುಮಾರಿ.ತ್ರಿಷಾ ಮತ್ತು ಆರೂಷಿ ಪ್ರಾರ್ಥಿಸಿ, ಉಮೇಶ್ ನಾಯಕ್ ಕಲ್ಲಪಾಪು ಸ್ವಾಗತಿಸಿದರು. ಶೀನ ನಾಯ್ಕ ಪ್ರಸ್ತಾವನೆಗೈದರು. ಪುರುಷೋತ್ತಮ ಪುತ್ತೂರು ಧನ್ಯವಾದಗೈದರು. ಶಿಕ್ಷಕ ಸುರೇಶ್ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ವಿಟ್ಲ ಮೈರ ಕೇಪು, ನಿತಿನ್ ಹೊಸಂಗಡಿ ನಿರ್ದೇಶನದ ಕಲ್ಜಿಗದ ಕಾಳಿ ಮಂತ್ರದೇವತೆ ” ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕ ನಡೆಯಿತು.