ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಕರಣದ ಪ್ರಮುಖ ಆರೋಪಿಗಳಾದ ಕಲೀಂ ಪಾಷಾ ಹಾಗೂ ಮುಜಾಮಿಲ್ ನನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರು ಸಿಸಿಬಿ ವಶದಲ್ಲಿದ್ದರು. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಘಟನೆ ವೇಳೆ ನಾನು ಅತ್ತೆ ಮನೆಯಲ್ಲಿದ್ದೆ. ಗಲಾಟೆ ನಡೆದ ಬಳಿಕ ನಾನು ಪೊಲೀಸ್ ಠಾಣೆ ಬಳಿ ಬಂದಿದ್ದೆ ಎಂದು ಕಲೀಂ ಪಾಷಾ ಉತ್ತರಿಸಿದ್ದಾನೆ. ಆದ್ರೆ ಪೊಲೀಸರು ಹೇಳುವ ಪ್ರಕಾರ, ಗಲಭೆ ವೇಲೆ ಕಲೀಂ ಪಾಷಾ ಸ್ಥಳದಲ್ಲಿದ್ದ. ಬಳಿಕ ಅಲ್ಲಿಂದ ತೆರಳಿದ್ದಾನೆ. ಈತ ಗಲಭೆಕೋರರಿಗೆ ಪ್ರಚೋದನೆ ನೀಡಿದ್ದ ಎಂಬ ಆರೋಪವಿದೆ.
ಇನ್ನು ಮತ್ತೋರ್ವ ಪ್ರಮುಖ ಆರೋಪಿ ಕೂಡ ಸತ್ಯ ಬಾಯ್ಬಿಟ್ಟಿಲ್ಲ. ನಾವು ದೂರಿನ ಪ್ರತಿ ಹಿಡಿದು ಠಾಣೆಗೆ ಬಂದಾಗ ಗಲಾಟೆ ಆಯ್ತು. ಶಾಂತಿಯುತವಾಗಿ ವರ್ತಿಸಿ ಎಂದು ಹೇಳಿದ್ದೆ ಅಂತ ಉತ್ತರಿಸಿದ್ದಾನೆ.
ಆದ್ರೆ ಆರೋಪಿಗಳು ಗಲಭೆಗೆ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರ ಬಳಿ ಸಾಕ್ಷಿ ಇದೆ ಎನ್ನಲಾಗಿದೆ. ಹೀಗಾಗಿ ಆರೋಪಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆದ ಪೊಲೀಸರು ಟೆಕ್ನಿಕಲ್ ಲ್ಯಾಬ್ ಗೆ ಕಳುಹಿಸಿದ್ದಾರೆ.