ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿರುವ 1000 ಹಾಸಿಗೆಗಳನ್ನು ಹೊಂದಿರುವ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊತ್ತಮೊದಲ ಪ್ಲಾಸ್ಮಾ ಥೆರಪಿ ಘಟಕಕ್ಕೆ ಸರಕಾರ ಪರವಾನಗಿ ನೀಡಿದೆ.
ಕಳೆದ 23 ವರ್ಷಗಳಿಂದ ಸಮಾಜದ ಆರೋಗ್ಯ ಸೇವೆಯಲ್ಲಿ ನಿರತವಾಗಿರುವ ಈ ಆಸ್ಪತ್ರೆಯು ಈಗಾಗಲೇ ಕೊರೊನಾ ರೋಗಿಗಳಿಗಾಗಿ ಮೀಸಲು ಹಾಸಿಗೆಗಳನ್ನು ಹೊಂದಿದ್ದು, ಸುಸಜ್ಜಿತ ತೀವ್ರ ನಿಗಾ ಘಟಕವನ್ನೂ ಹೊಂದಿದೆ. ಡಿಸಿಜಿಐ(ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ)ಯು ಬ್ಲಡ್ಬ್ಯಾಂಕ್ನ ಸೌಲಭ್ಯಗಳನ್ನು ಪರಿಶೀಲಿಸಿ ಪ್ಲಾಸ್ಮಾ ಚಿಕಿತ್ಸೆಗೆ ಪರವಾನಗಿ ನೀಡಿದೆ.
ಮೊದಲ ದಿನವೇ ಮೂವರು ದಾನಿಗಳಿಂದ ಪ್ಲಾಸ್ಮಾ ಸ್ವೀಕರಿಸಿ, ಅದರ ಮೂಲಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಧುನಿಕ ಸಾಧನಗಳು ಮತ್ತು ನುರಿತ ತಂತ್ರಜ್ಞರಿಂದ ಸುಸಜ್ಜಿತವಾಗಿರುವ ಬ್ಲಡ್ ಬ್ಯಾಂಕ್ನಿಂದಾಗಿ ಈಗ ಕೆ.ಎಸ್.ಹೆಗ್ಡೆ ಆಸ್ಪತ್ರೆಯು ಪ್ಲಾಸ್ಮಾ ಚಿಕಿತ್ಸೆಯೂ ಸೇರಿದಂತೆ ಕೊರೊನಾ ರೋಗಿಗಳಿಗೆ ಎಲ್ಲಸೌಕರ್ಯದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರು, ಎಲ್ಲ ಪುರುಷರು ಹಾಗೂ ಈವರೆಗೆ ಗರ್ಭಿಣಿಯರಾಗಿರದ ಮಹಿಳೆಯರು, 3.55 ಕಿ.ಗ್ರಾಂ.ಗಿಂತ ಹೆಚ್ಚು ತೂಕ ಹೊಂದಿರುವವರು, ಆಸ್ಪತ್ರೆಯಿಂದ ಬಿಡುಗಡೆಗೊಂಡ 28 ದಿನಗಳ ಬಳಿಕ ಪ್ಲಾಸ್ಮಾ ದೇಣಿಗೆ ನೀಡಬಹುದಾಗಿದೆ.