ಮಂಗಳೂರು: ಮಂಗಳೂರು ಹೊರ ವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದ ಆರು ಮಂದಿ ಯುವಕರನ್ನು ತರಾಟೆಗೆ ತೆಗೆದುಕೊಂಡಿರುವ ನೂತನ ಕಮೀಷನರ್ ಶಶಿ ಕುಮಾರ್ ಅವರ ವಿರುದ್ಧ ಕೇಸು ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ.
ಕಮೀಷನರ್ ಅಧಿಕಾರ ಸ್ವೀಕರಿಸಿದ್ದ ಎರಡೇ ದಿನದಲ್ಲಿ ತಡರಾತ್ರಿ ಅವಶ್ಯಕತೆಯಿಲ್ಲದೆ ತಿರುಗಾಡುವವರನ್ನು ಬೀದಿಬದಿ ಕುಳಿತುಕೊಳ್ಳುವವರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಮಂಗಳೂರು ನಗರದಲ್ಲಿ ತಡರಾತ್ರಿ ಕುಳಿತವರ ವಿರುದ್ಧ ಕ್ರಮ ತೆಗೆದುಕೊಂಡು ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲಿಯೂ ತಡರಾತ್ರಿ ಅಡ್ಡಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.
ಆದರೆ ಮಂಗಳವಾರ ತಡರಾತ್ರಿ ವೇಳೆ ರಾ.ಹೆ.66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ ಉಚ್ಚಿಲ ಆಸುಪಾಸಿನ ಆರು ಮಂದಿ ಯುವಕರು ಮದ್ಯ ಪಾರ್ಟಿ ನಡೆಸುತ್ತಿದ್ದರು. ಖುದ್ದು ರೌಂಡ್ಸ್ ನಲ್ಲಿದ್ದ ಪೊಲೀಸ್ ಕಮೀಷನರ್ ಬಸ್ ನಿಲ್ದಾಣಕ್ಕೆ ದಾಳಿ ನಡೆಸಿ ಆರು ಮಂದಿ ಯುವಕರನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಯುವಕರ ಬಳಿಯಿದ್ದ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೆ.ಪಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿಗೆ ನೂತನ ಪೊಲೀಸ್ ಆಯುಕ್ತರಾಗಿ ಎನ್ ಶಶಿ ಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕದ ವಿಧ್ಯಾಮಾನಗಳನ್ನು ಗಮನಿಸಿದಾಗ ಕಾನೂನು ಸುವ್ಯವಸ್ಥೆಯಲ್ಲಿ ಹಳಿ ತಪ್ಪಿದ್ದ ಮಂಗಳೂರು ನಗರ ಮತ್ತೆ ಸರಿದಾರಿಗೆ ಬರುವ ಲಕ್ಷಣಗಳು ಗೋಚರಿಸುತ್ತಿದೆ.
ಅಧಿಕಾರ ವಹಿಸಿಕೊಂಡ ದಿನದಿಂದಲೇ ಖುದ್ದಾಗಿ ಫೀಳ್ಡಿಗಿಳಿದು ಶಶಿಕುಮಾರ್ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆಯುಕ್ತರ ಪೊಲೀಸ್ ಗಿರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.